ರಿಪ್ಪನ್ ಪೇಟೆ : ದೀಪಾವಳಿ ಪಾಡ್ಯದಂದು ಗೋವುಗಳನ್ನು ಪೂಜಿಸುತ್ತೇವೆ. ಸನಾತನ ಧರ್ಮ ಶಾಸ್ತçದಲ್ಲಿ ಗೋವುಗಳು ಪೃಥ್ವಿಗೆ ಹಾಲುಣಿಸುವ ಮಾತೃ ಸಮಾನ ಎಂಬ ವಿಚಾರವನ್ನು ಸರ್ವರೂ ಅರಿತುಕೊಳ್ಳಬೇಕು ಎಂದು ದಕ್ಷಿಣ ಭಾರತದ ಜೈನರ ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾದ ಹೊಸನಗರ ತಾಲೂಕಿನ ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ಶ್ರೀಕ್ಷೇತ್ರ ಹೊಂಬುಜ ಶ್ರೀಮಠದ ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆಯನ್ನು ನೆರವೇರಿಸಿ ಧಾನ್ಯಾದಿ ಕಜ್ಜಾಯಗಳನ್ನು ಗೋವುಗಳಿಗೆ ಸೇವಿಸಲು ನೀಡಿ, ಆಗಮೋಕ್ತ ವಿಧಾನದಲ್ಲಿ ದೀಪ ಬೆಳಗಿಸಿ, ಗಂಧ ಕುಂಕುಮ ಪ್ರಸಾದ, ತಿಲಕವಿಟ್ಟು ಪೂಜಿಸಿದ ಬಳಿಕ ಪ್ರವನಚದಲ್ಲಿ ತಿಳಿಸಿದರು.
ಕೃಷಿ ಕ್ಷೇತ್ರ ವರ್ಧಿಸಲು ಪ್ರತಿಯೋರ್ವ ರೈತರು ಕಾಮಧೇನು ಸ್ವರೂಪದ ಗೋವುಗಳನ್ನು ಪೋಷಿಸುವುದು ಭಾರತೀಯ ಸನಾತನ ಧರ್ಮದ ಸಂಕೇತ. ದೀಪಾವಳಿ ಪರ್ವದ ಆಚರಣೆಯಿಂದ ರಾಷ್ಟ್ರ ಬೆಳಗಲೆಂದು ಶುಭಾಶೀರ್ವಾದ ಮಾಡಿದರು.
ಹೊಂಬುಜ ಜೈನ ಮಠದಲ್ಲಿನ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಅಬೀಷ್ಠವರಪ್ರದಾಯಿನಿ,ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ, ತ್ರಿಕೂಟ ಜಿನಾಲಯಗಳಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು.


