ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 6 ಬಾಂಗ್ಲಾದೇಶಿ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಪತ್ತೆಹಚ್ಚಿದ್ದಾರೆ.
ಸಾಮಾನ್ಯ ಪರಿಶೀಲನೆ ಹಾಗೂ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ವೇಳೆ, ಈ ಕಾರ್ಮಿಕರು ಭಾರತದಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಪ್ರಕರಣದ ಕುರಿತು ವಿವರವಾದ ವರದಿಯನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಕಳುಹಿಸಲಾಗಿದೆ.
FRRO ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ, ಅಗತ್ಯವಿದ್ದರೆ ಅವರನ್ನು ಬಂಧನ ಕೇಂದ್ರದಲ್ಲಿ (Detention Centre) ಇರಿಸುವ ಕುರಿತು ಆದೇಶ ನೀಡಲಿದ್ದು, ಬಳಿಕ ಭಾರತದಿಂದ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಪತ್ತೆಯಾದ ವ್ಯಕ್ತಿಗಳ ಭಾರತ ಪ್ರವೇಶದ ಮಾರ್ಗ, ಎಷ್ಟು ಸಮಯದಿಂದ ಇಲ್ಲಿ ವಾಸವಾಗಿದ್ದರು, ಯಾರ ಮೂಲಕ ಕೆಲಸಕ್ಕೆ ಸೇರಿದ್ದರು ಹಾಗೂ ಅವರಿಗೆ ಆಶ್ರಯ ಅಥವಾ ಉದ್ಯೋಗ ನೀಡಿದವರ ಕುರಿತು ಸುರತ್ಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಕ್ರಮ ವಲಸೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿದೇಶಿ ಪ್ರಜೆಗಳ ದಾಖಲೆಗಳ ಪರಿಶೀಲನೆ ಹಾಗೂ ನಿರ್ಮಾಣ ಕಾಮಗಾರಿ, ಕೈಗಾರಿಕೆ ಮತ್ತು ಇತರೆ ಉದ್ಯೋಗ ಕ್ಷೇತ್ರಗಳಲ್ಲಿ ವಿಶೇಷ ತಪಾಸಣೆ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


