ಉಡುಪಿ ; ಕಳ್ಳತನದಲ್ಲಿಯೂ ಅನೇಕ ರೀತಿಯ ವಿಧಗಳಿವೆ ಎಂಬುದಕ್ಕೆ ಈ ಸುದ್ದಿ ಸಾಕ್ಷಿ. ಅಪ್ಪ ಮಗ ಸೇರಿ ತಾವೇ ಮಾರಿದ ಬಸ್ಸನ್ನೇ ಪುನಃ ಕದ್ದು ಮನೆಗೆ ತಂದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ನಡೆದಿದೆ.
ಅಪ್ಪ ಮತ್ತು ಮಗ ತಮ್ಮ ಬಸ್ಸು ಮಾರಾಟಕ್ಕಿದೆ ಎಂದು ಓಎಲ್ಎಕ್ಸ್ನಲ್ಲಿ ಪ್ರಕಟಣೆ ಹಾಕಿದ್ದರು. ಅದನ್ನು ನೋಡಿ ತುಮಕೂರಿನ ಕೊರಟಗೆರೆ ನಿವಾಸಿ ಸೈಯದ್ ಗೌಸ್ ಎಂಬ ಬಸ್ ಉದ್ಯಮಿಯ ಮಗ ಸಿದ್ದಿಕಿ ಹಾಗೂ ಗೆಳೆಯ ಜಾವೇದ್ ಜೊತೆ ಕಾಪುವಿಗೆ ಬಂದು 2017ನೇ ಮಾಡೆಲ್ನ ಬಸ್ಸನ್ನು ₹9.50 ಲಕ್ಷಕ್ಕೆ ಖರೀದಿಸಲು ವ್ಯಾಪಾರ ಕುದುರಿಸಿ, ₹2 ಲಕ್ಷ ನೀಡಿದ್ದರು. ಉಳಿದ ಹಣ 15 ದಿನದ ಒಳಗೆ ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ₹2.80 ಲಕ್ಷವನ್ನು ಫೋನ್ ಪೇ, 6.20 ಲಕ್ಷ ನಗದು ಸೇರಿ ಒಟ್ಟು ₹9 ಲಕ್ಷ ನೀಡಿ ಬಸ್ಸನ್ನು ತೆಗೆದುಕೊಂಡು ಹೋಗಿದ್ದರು. ಇದಾಗಿ ಕೆಲವು ದಿನಗಳಲ್ಲಿ ಆರೋಪಿಗಳು ತುಮಕೂರಿನಲ್ಲಿ ನಿಲ್ಲಿಸಿದ್ದ ಬಸ್ಸನ್ನು ಕಳುವು ಮಾಡಿ ತಮ್ಮೂರಿಗೆ ತಂದಿದ್ದಾರೆ. ಈ ಸಂಬಂಧ ಕಾಪು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೆ ಇಲ್ಲಿ ಬಸ್ಸು ಮಾರಿದವರೆ ಸಮೀರ್ ಮತ್ತು ಆತನ ತಂದೆ ಅಬ್ದುಲ್ ಖಾದರ್ ಆರೋಪಿಗಳಾದದು ಒಂದು ವಿಪರ್ಯಾಸ.


