ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಪದಾಧಿಕಾರಿಗಳ ಮಂತ್ರಾಲಯ ಯಾತ್ರೆ ದುರಂತದಲ್ಲಿ ಅಂತ್ಯಗೊಂಡಿದ್ದು, ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರಸ್ಟ್ನ ಕೇಂದ್ರೀಯ ಘಟಕದ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ (ಅಶೋಕನಗರ) ಮೃತಪಟ್ಟಿದ್ದಾರೆ.

ಟ್ರಸ್ಟ್ನ ಸ್ಥಾಪಕರಾದ ಸತೀಶ್ ಶೆಟ್ಟಿ ಪಟ್ಲ ಹಾಗೂ ಇತರ ಪದಾಧಿಕಾರಿಗಳು ಎರಡು ಕಾರುಗಳಲ್ಲಿ ತಿರುಪತಿ ಮತ್ತು ಮಂತ್ರಾಲಯ ಯಾತ್ರೆಗೆ ತೆರಳಿದ್ದರು. ತಿರುಪತಿಯಿಂದ ಮಂತ್ರಾಲಯದತ್ತ ಪ್ರಯಾಣಿಸುತ್ತಿದ್ದ ವೇಳೆ ಸತೀಶ್ ಶೆಟ್ಟಿ ಪಟ್ಲ ಪ್ರಯಾಣಿಸುತ್ತಿದ್ದ ಕಾರು ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದೆ.
ಇನ್ನೊಂದು ಕಾರಿನಲ್ಲಿ ರವಿಚಂದ್ರ ಶೆಟ್ಟಿ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದು, ಮಂತ್ರಾಲಯದಿಂದ ಸುಮಾರು 10 ನಿಮಿಷ ದೂರದಲ್ಲಿದ್ದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರನ್ನು ಪ್ರದೀಪ್ ಆಳ್ವ (ಕದ್ರಿ) ಚಲಾಯಿಸುತ್ತಿದ್ದರು. ಅಪಘಾತದ ತೀವ್ರತೆಗೆ ಹಿಂಬದಿ ಆಸನದಲ್ಲಿದ್ದ ರವಿಚಂದ್ರ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಪುರುಷೋತ್ತಮ್ ಭಂಡಾರಿ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸಿಎ ಸುದೇಶ್ ಕುಮಾರ್ ಹಾಗೂ ಚಾಲಕ ಪ್ರದೀಪ್ ಆಳ್ವ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


