ಮುಂಬೈ : ಮುಂಬರುವ ಟೆಸ್ಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಶೀಘ್ರದಲ್ಲೇ ಮಹತ್ವದ ಆಯ್ಕೆ ಸಮಿತಿ ಸಭೆ ನಡೆಸಲಿದ್ದು, ತಂಡದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಯಲಿದೆ.
ವರದಿಗಳ ಪ್ರಕಾರ, ಗಾಯದ ನಿರ್ವಹಣೆಯ ನಡುವೆಯೂ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ವಿಶ್ರಾಂತಿ ನೀಡುವ ಬದಲು ಆಡುವ ಹನ್ನೊಂದರ ಬಳಗದಲ್ಲೇ ಉಳಿಸುವ ಸಾಧ್ಯತೆ ಇದೆ. ಪ್ರಮುಖ ಸರಣಿಗಳ ಹಿನ್ನೆಲೆಯಲ್ಲಿ ಅವರ ಅನುಭವ ತಂಡಕ್ಕೆ ಅಗತ್ಯವೆಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.
ಇನ್ನೊಂದೆಡೆ, ದೀರ್ಘಕಾಲದಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ ಅವರ ಆಯ್ಕೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಶಮಿ ಅವರ ಫಿಟ್ನೆಸ್ ಹಾಗೂ ಪಂದ್ಯ ಸಿದ್ಧತೆಯ ಬಗ್ಗೆ ಆಯ್ಕೆದಾರರು ಚರ್ಚೆ ನಡೆಸಲಿದ್ದಾರೆ.
ಯುವ ವೇಗಿಗಳಿಗೆ ಅವಕಾಶ?
ಬಿಸಿಸಿಐ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ದಿಕ್ಕಿನಲ್ಲಿಯೂ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ: ಅನ್ಶುಲ್ ಕಾಂಬೋಜ್,ಔಕಿಬ್ ನಬಿ ಅವರನ್ನು ತಂಡದಲ್ಲಿ ಪರಿಗಣಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮುಂದಿನ ದಿನಗಳಲ್ಲಿ ಅಂತಿಮ ತಂಡ ಪ್ರಕಟಿಸುವ ಸಾಧ್ಯತೆ ಇದೆ.


