ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಯೋಜನೆಯಡಿ ಒಟ್ಟು ₹57 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಈ ಯೋಜನೆಯಡಿ ಜಿಲ್ಲೆಯಾದ್ಯಂತ 14 ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಒಟ್ಟು 82.94 ಕಿ.ಮೀ. ಉದ್ದದ ರಸ್ತೆಗಳು ಅಭಿವೃದ್ಧಿಯಾಗಲಿವೆ. ಮಂಗಳೂರು, ಉಳ್ಳಾಲ, ಮೂಡುಬಿದ್ರೆ, ಬಂಟ್ವಾಳ, ಪುತ್ತೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಮುಖ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳನ್ನು ಸುಧಾರಿಸಲಾಗುವುದು.
ಯೋಜನೆಯಡಿ ಕಟಪಾಡಿ–ಅಬ್ಬಕ್ಕ ಸರ್ಕಲ್ ರಸ್ತೆ, ಸಜಿಪನಾಡು–ಬೋಳ್ಯಾರ್ ರಸ್ತೆ, ಹೊಸಂಗಡಿ–ಪುಚ್ಚಮೊಗರು–ಬೆಳ್ತಂಗಡಿ ಕ್ರಾಸ್ ರಸ್ತೆ, ಸುರತ್ಕಲ್–ಕಬಕ ರಸ್ತೆ, ಪುಂಜಾಲಕಟ್ಟೆ–ಕುದ್ಕೋಲಿ ರಸ್ತೆ, ಸುಬ್ರಹ್ಮಣ್ಯ–ಮಂಜೇಶ್ವರ ರಾಜ್ಯ ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ.
ಇದಲ್ಲದೆ, ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆವರೆಗೆ ರಾಜ್ಯ ಹೆದ್ದಾರಿ ನವೀಕರಣ, ಸೋಮಂತಡ್ಕ–ಹೆಡ್ಯ ರಸ್ತೆ ಅಭಿವೃದ್ಧಿ ಹಾಗೂ ಬಂಟ್ವಾಳದ ಅನಂತಾಡಿ–ಮಂಗಿಲಪದವು–ಕೊಡಪದವು ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಗಳಿಗೂ ಅನುಮೋದನೆ ದೊರೆತಿದೆ.
ಈ ಯೋಜನೆಯಿಂದ ಜಿಲ್ಲೆಯ ಸಂಪರ್ಕ ವ್ಯವಸ್ಥೆ ಬಲಗೊಳ್ಳಲಿದ್ದು, ಸಂಚಾರ ಸುಗಮವಾಗುವುದರ ಜೊತೆಗೆ ಆರ್ಥಿಕ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಯೋಜನೆಗೆ ಅನುಮೋದನೆ ನೀಡಿದ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲೆಯ ಜನರ ಪರವಾಗಿ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.


