ಉಡುಪಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ನೀಡಿರುವ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ವೇಳೆ ಶಾಸಕ ಯಶ್ಪಾಲ್ ಸುವರ್ಣರನ್ನು 10 ತಲೆ ಹಾಗೂ 8 ಕೈಗಳ ರಾವಣನಂತೆ ಬಿಂಬಿಸಿದ ಬೃಹತ್ ಕಟೌಟ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕಟೌಟ್ನಲ್ಲಿ ಯಶ್ಪಾಲ್ ಸುವರ್ಣರನ್ನು ಚಡ್ಡಿ ಧರಿಸಿರುವಂತೆ ಚಿತ್ರಿಸಲಾಗಿದ್ದು, ಕೈಗಳಲ್ಲಿ ಮದ್ಯದ ಬಾಟಲಿ, ಐಸ್ಕ್ಯಾಂಡಿ, ಮೊಬೈಲ್, ಟವಲ್, ಜೋಕರ್ ಇಸ್ಪೀಟ್, ಮೆಲೋಡಿ ಚಾಕೊಲೇಟ್ ಹಾಗೂ ಚೊಂಬು ಸೇರಿದಂತೆ ವಿವಿಧ ವಸ್ತುಗಳನ್ನು ಹಿಡಿದಿರುವಂತೆ ಬಿಂಬಿಸಲಾಗಿತ್ತು. ಈ ಕಟೌಟ್ ಪ್ರತಿಭಟನೆಯಲ್ಲಿ ವಿಶೇಷ ಗಮನ ಸೆಳೆಯಿತು.
ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಕಟೌಟ್ಗೆ ಮೊಟ್ಟೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಯಶ್ಪಾಲ್ ಸುವರ್ಣ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಾವಣನಂತೆ ಬಿಂಬಿಸಲಾದ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ದಹಿಸಿದರು. ಪ್ರತಿಭಟನೆಯ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಬಿಜೆಪಿ ನಾಯಕರು ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.


