ತಿರುನಲ್ವೇಲಿ : ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಅಂಬಸಮುದ್ರಂ ಸಮೀಪ ಗುರುವಾರ ನಡೆದ ಭೀಕರ ಘಟನೆಯಲ್ಲಿ, ತಂದೆ ಹಾಗೂ ಅವರ 5 ವರ್ಷದ ಮಗನನ್ನು ನಿಗೂಢ ಗ್ಯಾಂಗ್ ಹತ್ಯೆ ಮಾಡಿ ಶಿರಚ್ಛೇದ ಮಾಡಿರುವ ಘಟನೆ ಆತಂಕ ಸೃಷ್ಟಿಸಿದೆ.
ಮೃತರನ್ನು ಕಾಳಿಮುತ್ತು ಮತ್ತು ಅವರ ಕಿರಿಯ ಪುತ್ರ ಜಯರಾಜ್ (5) ಎಂದು ಗುರುತಿಸಲಾಗಿದೆ. ಕಾಳಿಮುತ್ತು ಅವರು ತಮ್ಮ ಇಬ್ಬರು ಪುತ್ರರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಲ್ಲಿಡೈಕುರಿಚಿ ಕಡೆಗೆ ತೆರಳುತ್ತಿದ್ದ ವೇಳೆ, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಬೈಕ್ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಗ್ಯಾಂಗ್, ಕಾಳಿಮುತ್ತು ಮತ್ತು ಜಯರಾಜ್ ಅವರನ್ನು ಶಿರಚ್ಛೇದ ಮಾಡಿ ಪರಾರಿಯಾಗಿದೆ. ಕಾಳಿಮುತ್ತು ಅವರ ತಲೆಯನ್ನು ಕಲ್ಲಿಡೈಕುರಿಚಿ–ತಿರುನಲ್ವೇಲಿ ಹೆದ್ದಾರಿಯ ಮಧ್ಯದಲ್ಲೇ ಬಿಟ್ಟು ಹೋಗಿರುವುದು ಘಟನೆಗೆ ಮತ್ತಷ್ಟು ಭೀಕರ ಸ್ವರೂಪ ನೀಡಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಿರಿಯ ಪುತ್ರ ಚಿನ್ನರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹತ್ಯೆಗೆ ಕಾರಣವೇನು ಹಾಗೂ ದುಷ್ಕರ್ಮಿಗಳ ಗುರುತು ಪತ್ತೆಹಚ್ಚಲು ವಿಶೇಷ ತನಿಖೆ ಆರಂಭಿಸಿದ್ದಾರೆ.

