ಚಿಕ್ಕಮಗಳೂರು : ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಎರಡು ಕಾಡಾನೆಗಳು ನುಗ್ಗಿ ಇಡೀ ರಾತ್ರಿ ಜನರ ನಿದ್ದೆಗೆಡಿಸಿದ ಘಟನೆ ನಡೆದಿದೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ಹಲವು ಗಂಟೆಗಳ ಕಾಲ ಜಾಗರಣೆ ಮಾಡುವಂತಾಯಿತು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣಕ್ಕೆ ನುಗ್ಗಿದ ಕಾಡಾನೆಗಳು ಕಾಲೇಜಿನ ಗೇಟ್ನ್ನು ಧ್ವಂಸಗೊಳಿಸಿವೆ. ಅಲ್ಲದೆ, ಕೆಲವು ಮನೆಗಳ ಗೇಟ್ಗಳನ್ನು ಮುರಿದು ಮನೆ ಅಂಗಳಕ್ಕೆ ಪ್ರವೇಶಿಸಲು ಯತ್ನಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮದೊಳಗೆ ಕಾಡಾನೆಗಳು ಸಂಚರಿಸುತ್ತಿರುವ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿಯಲ್ಲೇ ಕಾರ್ಯಾಚರಣೆ ನಡೆಸಿದ ಆಲ್ದೂರು ಅರಣ್ಯ ಇಲಾಖೆ ಸಿಬ್ಬಂದಿ, ಕಾಡಾನೆಗಳನ್ನು ಮತ್ತೆ ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡಾನೆಗಳ ಓಡಾಟದಿಂದ ಆಲ್ದೂರು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರು ರಾತ್ರಿ ಪೂರ್ತಿ ಎಚ್ಚರಿಕೆಯಿಂದ ಕಾಲ ಕಳೆಯಬೇಕಾಯಿತು. ಕಾಡಾನೆಗಳ ನಿರಂತರ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


