ಅಯೋಧ್ಯೆ : ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದಾನವಾಗಿ ನೀಡಲಾಗಿದ್ದ ಅಂದಾಜು ₹5 ಕೋಟಿ ಮೌಲ್ಯದ ಚಿನ್ನದ ಲೇಪಿತ ‘ಶ್ರೀರಾಮಚರಿತಮಾನಸ’ ಗ್ರಂಥ ನಿಗೂಢವಾಗಿ ನಾಪತ್ತೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣನ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ದಿವಂಗತ ತಾಯಿಯ ನೆನಪಿಗಾಗಿ ಹಾಗೂ ಶ್ರೀರಾಮನ ಮೇಲಿನ ಭಕ್ತಿಯಿಂದ ಕುಟುಂಬದ ಜೀವನದ ಸಂಪಾದನೆ ಮತ್ತು ತಾಯಿಯ ಚಿನ್ನದ ಆಭರಣಗಳನ್ನು ಕರಗಿಸಿ ಈ ಗ್ರಂಥವನ್ನು ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಸುಮಾರು 147 ಕೆಜಿ ತೂಕದ, 522 ಪುಟಗಳ ಈ ಗ್ರಂಥಕ್ಕೆ 800 ಗ್ರಾಂಕ್ಕೂ ಅಧಿಕ ಚಿನ್ನದ ಲೇಪನ ಮಾಡಲಾಗಿದ್ದು, ಇದರ ಮೌಲ್ಯ ಸುಮಾರು ₹4.5 ರಿಂದ ₹5 ಕೋಟಿ ಎಂದು ಅವರು ಹೇಳಿದ್ದಾರೆ.
2024ರಲ್ಲಿ ರಾಮಮಂದಿರ ಟ್ರಸ್ಟ್ನ ಚಂಪತ್ ರಾಯ್ ಅವರಿಗೆ ಈ ಗ್ರಂಥವನ್ನು ಹಸ್ತಾಂತರಿಸಲಾಗಿತ್ತು. ಇದೀಗ ಅದು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಟ್ರಸ್ಟ್ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದೇ ವೇಳೆ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಪತ್ರ ಬರೆದು, ಸಾರ್ವಜನಿಕವಾಗಿ ಆರೋಪ ಮಾಡಿರುವವರನ್ನು ವಿಚಾರಣೆಗೆ ಒಳಪಡಿಸುವಂತೆ ಆಗ್ರಹಿಸಿದೆ.
ಪ್ರಕರಣದ ಕುರಿತು ಇನ್ನೂ ರಾಮಮಂದಿರ ಟ್ರಸ್ಟ್ನಿಂದ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.


