ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭಾರೀ ಅಕ್ರಮದ ಸುಳಿವು ಸಿಕ್ಕಿರುವ ಟಿಡಿಆರ್ (Transferable Development Rights) ಪ್ರಕರಣದಲ್ಲಿ 20 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಪ್ರಮುಖ ಕಡತಗಳು ನಾಪತ್ತೆಯಾಗಿವೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಬಿಬಿಎಂಪಿ 2007-08 ರಲ್ಲಿ ಸ್ಥಾಪನೆಯಾದ ಬಳಿಕದಿಂದ ಟಿಡಿಆರ್ ಸಂಬಂಧಿತ ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಈ ಸಂಬಂಧದ ಮಹತ್ವದ ದಾಖಲೆಗಳು ಜಿಬಿಎ ಭೂಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಕಚೇರಿಯಿಂದ ಕಾಣೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.
ಆರ್ಟಿಐ ಅರ್ಜಿಯಿಂದ 2014ರಿಂದ 2017ರವರೆಗೆ ನೀಡಲಾದ ಟಿಡಿಆರ್/ಡಿಆರ್ಸಿ ದಾಖಲೆಗಳು ಲಭ್ಯವಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಧಿಕಾರಿಗಳು 2014ರವರೆಗಿನ ಮಾಹಿತಿಯನ್ನು ಮಾತ್ರ ಒದಗಿಸಿದ್ದು, ನಂತರದ ಮೂರು ವರ್ಷಗಳ ದಾಖಲೆಗಳು ಇಲ್ಲವೆಂದು ತಿಳಿಸಿದ್ದಾರೆ. 14 ಐಎಎಸ್/ಕೆಎಎಸ್ ಅಧಿಕಾರಿಗಳು ಹಾಗೂ 57 ಮಂದಿಯ ವಿರುದ್ಧ ಪ್ರಕರಣ ದಾಖಲು ತನಿಖೆ ಪ್ರಗತಿಯಲ್ಲಿದೆ ಜಾರಿ ನಿರ್ದೇಶನಾಲಯದಲ್ಲೂ ದೂರು ದಾಖಲಾಗಿದ್ದು ಪ್ರಕರಣ ಗಂಭೀರಗೊಂಡಿದೆ
ಮಹದೇವಪುರ ವಲಯದ ರಸ್ತೆ ಅಗಲೀಕರಣ ಹಾಗೂ ಹೆಬ್ಬಾಳ-ಯಲಹಂಕ ರಸ್ತೆ ಯೋಜನೆಗೆ ಸಂಬಂಧಿಸಿದ ಟಿಡಿಆರ್ ದಾಖಲೆಗಳು ಸೇರಿ 50ಕ್ಕೂ ಹೆಚ್ಚು ಪ್ರಮುಖ ಕಡತಗಳು ಕಾಣೆಯಾಗಿವೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ಅಥವಾ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ. ಟಿಡಿಆರ್ ಹಗರಣದ ದಾಖಲೆಗಳ ನಾಪತ್ತೆ ಪ್ರಕರಣ ಆಡಳಿತದ ಪಾರದರ್ಶಕತೆ ಮೇಲೆ ಗಂಭೀರ ಅನುಮಾನ ಮೂಡಿಸಿದ್ದು, ಸಮಗ್ರ ತನಿಖೆ ಅಗತ್ಯವಿದೆ.

