ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಅಂದಾಜು 300 ಕೋಟಿ ರೂ. ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ಮುಟ್ಟಗೋಲು ಹಾಕಿಕೊಂಡಿದೆ.ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಜಾರಿ ನಿರ್ದೇಶನಾಲಯ, ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಏಜೆಂಟ್ಗಳಾಗಿ ಕೆಲಸ ಮಾಡುವವರ ಹೆಸರಿನಲ್ಲಿ ಸೈಟ್ಗಳು ನೋಂದಣಿಯಾಗಿವೆ ಎಂದು ತಿಳಿಸಿದೆ.
ಬಿ.ಎಂ.ಪಾರ್ವತಿ ಅವರಿಗೆ 14 ಬದಲಿ ನಿವೇಶನ ಹಂಚಿಕೆ ಸಂಬಂಧ ದಾಖಲಾದ ದೂರಿನನ್ವಯ
ನಡೆಸಿದ ದಾಳಿಯಲ್ಲಿ ಆ 14 ನಿವೇಶನಗಳಲ್ಲದೇ ಇನ್ನೂ ನೂರಾರು ನಿವೇಶನಗಳ ವಹಿವಾಟು
ಬೇನಾಮಿ ಹಾಗೂ ನಕಲಿ ಹೆಸರುಗಳಲ್ಲಿ ನಡೆದಿದೆ. ಅದಕ್ಕಾಗಿ ಅಕ್ರಮ ಹಣ ವರ್ಗಾವಣೆ ಕೂಡ
ನಡೆದಿದೆ. ಮುಡಾದ ಮಾಜಿ ಅಧ್ಯಕ್ಷರು ಹಾಗೂ ಹಿಂದಿನ ಆಯುಕ್ತರ ವಿರುದ್ಧ ಕೇಳಿಬಂದ ದೂರುಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿರುವುದು ಪತ್ತೆಯಾಗಿದೆ. ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸಂಬಂದಿಗಳ ಹೆಸರಿನಲ್ಲಿ ಸಹಕಾರ ಸಂಸ್ಥೆಯೊಂದರ ಮೂಲಕ ಹಣದ ವಹಿವಾಟು ಮತ್ತು ವಾಹನಗಳ ಖರೀದಿ ನಡೆದಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ


