ಮಂಗಳೂರು : ಬುಧವಾರ ಮುಂಜಾನೆ ಸುರಿದ ಭಾರೀ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ ಮಂಗಳೂರು ನಗರದ ಕೆಲವೆಡೆ ಅವಾಂತರಗಳು ಉಂಟಾಗಿವೆ.
ನಗರದ ಕಾರ್ ಸ್ಟ್ರೀಟ್ ಸಮೀಪದ ಚಮ್ಮಾರ್ ಗಲ್ಲಿಯ ಬಸವಣಗುಡಿ ಬಳಿ ಇರುವ ಅಶ್ವತ್ಥ ಕಟ್ಟೆ ಬಳಿ ಬೆಳಗಿನ ಜಾವ ಸುಮಾರು 3:30ರ ವೇಳೆಗೆ ಅಶ್ವತ್ಥ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಕೊಂಬೆ ಸಮೀಪದಲ್ಲಿದ್ದ ಎರಡು ಮನೆಗಳು ಹಾಗೂ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದು, ಘಟನೆಯಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಎರಡು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಘಟನೆ ಸಂಭವಿಸಿದ ವೇಳೆ ಮನೆ ನಿವಾಸಿಗಳು ಒಳಗಡೆಯಲ್ಲೇ ಇದ್ದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಸಂಭವವಾಗಿಲ್ಲ ಎಂದು ತಿಳಿದುಬಂದಿದೆ. ಮರದ ಕೊಂಬೆ ರಸ್ತೆ ಮೇಲೆ ಬಿದ್ದ ಪರಿಣಾಮ ಸ್ಥಳೀಯ ರಸ್ತೆ ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ ಉಂಟಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸ್ಥಳೀಯರು ತೆರವು ಕಾರ್ಯ ಕೈಗೊಂಡಿದ್ದಾರೆ.


