ಮಂಗಳೂರು : ಬುಧವಾರ ಮುಂಜಾನೆ ಸುರಿದ ಭಾರೀ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಅವಾಂತರಗಳು ಸಂಭವಿಸಿವೆ.
ನಗರದ ಅತ್ತಾವರ ಪ್ರದೇಶದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಗೋಡೆ ಕುಸಿದು ಸುಮಾರು 8ಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿರುವ ಘಟನೆ ವರದಿಯಾಗಿದೆ. ಇಂದು ದೇವಸ್ಥಾನದಲ್ಲಿ ಬ್ರಹ್ಮಕಲಶ ಕಾರ್ಯಕ್ರಮ ನಡೆಯಲು ಸಿದ್ಧತೆ ನಡೆಯುತ್ತಿದ್ದ ಹಿನ್ನೆಲೆ, ಹಿಂಬದಿ ಪಾರ್ಕಿಂಗ್ ಪ್ರದೇಶದಲ್ಲಿ ಸ್ಥಳೀಯರು ತಮ್ಮ ಕಾರುಗಳನ್ನು ನಿಲ್ಲಿಸಿದ್ದರು. ಈ ವೇಳೆ, ಭಾರೀ ಮಳೆಯ ಪರಿಣಾಮ ತಡೆಗೋಡೆ ಕುಸಿದು ಮಣ್ಣು ಪಾರ್ಕಿಂಗ್ ಪ್ರದೇಶಕ್ಕೆ ಜಾರಿಬಿದ್ದಿದೆ.
ಮಣ್ಣು ಕುಸಿತದಿಂದ ಅಲ್ಲಿದ್ದ ಕಾರುಗಳ ಮೇಲೆ ಮಣ್ಣು ಬಿದ್ದು ಅವುಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಕಾರುಗಳನ್ನು ಖರೀದಿಸಿ ಸಾಲ ಪಾವತಿ ಮಾಡುತ್ತಿದ್ದ ಮಾಲೀಕರು ಈ ಘಟನೆದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಹೆಚ್ಚಿನ ಹಾನಿ ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


