ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2025–26ನೇ ಸಾಲಿನಲ್ಲಿ ರೂ.1,270 ಕೋಟಿ ವ್ಯವಹಾರ ನಡೆಸಿ ಶೇ.8.18ರಷ್ಟು ಬೆಳವಣಿಗೆ ದಾಖಲಿಸಿದೆ. ಹಿಂದಿನ ಸಾಲಿನಲ್ಲಿ ರೂ.1,174 ಕೋಟಿ ವ್ಯವಹಾರ ನಡೆದಿತ್ತು 2025–26ರಲ್ಲಿ ದಿನವಹಿ ಸರಾಸರಿ 4.07 ಲಕ್ಷ ಲೀಟರ್ ಹಾಲು ಶೇಖರಣೆಗೊಂಡಿದ್ದು, ಕಳೆದ ಸಾಲಿನೊಂದಿಗೆ ಹೋಲಿಸಿದರೆ ಶೇ.19ರಷ್ಟು ಹೆಚ್ಚಳ ಕಂಡಿದೆ. ಒಕ್ಕೂಟವು 51,693 ಸಕ್ರಿಯ ಸದಸ್ಯರನ್ನು ಹೊಂದಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆಯವರು ತಿಳಿಸಿದ್ದಾರೆ.
ಒಕ್ಕೂಟವು ಈ ಸಾಲಿನಲ್ಲಿ ರೂ.10.61 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ರೂ.12.79 ಕೋಟಿ ಲಾಭ ದಾಖಲಾಗಿತ್ತು. ಹೈನುಗಾರರಿಗೆ ಲೀಟರ್ಗೆ ರೂ.1.50 ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಫೆಬ್ರವರಿ 21 ರಿಂದ ಮೇ 31ರವರೆಗೆ ವಿಶೇಷವಾಗಿ ರೂ.1 ಹೆಚ್ಚುವರಿ ನೀಡಿ ಒಟ್ಟು ರೂ.2.50 ಪ್ರೋತ್ಸಾಹಧನ ನೀಡಲಾಗಿದೆ. ಒಟ್ಟಾರೆ ರೂ.23.99 ಕೋಟಿ ಪ್ರೋತ್ಸಾಹಧನ ವಿತರಿಸಲಾಗಿದೆ ಮಿನಿ ಡೇರಿ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ವಾಣಿಜ್ಯ ಡೇರಿ ಘಟಕ, ಹಸಿರು ತಾಕು, ರಾಸು ಖರೀದಿ ಮತ್ತು ಕರು ಸಾಕಾಣಿಕೆ ಸೇರಿದಂತೆ ವಿವಿಧ ಯೋಜನೆಗಳಿಗೆ ರೂ.6.64 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಒಕ್ಕೂಟದ ವ್ಯಾಪ್ತಿಯಲ್ಲಿ 1,781 ಡೀಲರ್ಗಳು, 42 ಪಾರ್ಲರ್ಗಳು, 91 ಫ್ರಾಂಚೈಸಿಗಳು ಮತ್ತು 15 ಟಿಸಿಡಿಗಳ ಮೂಲಕ ದಿನವಹಿ ಸರಾಸರಿ 3,87,360 ಲೀಟರ್ ಹಾಲು ಮಾರಾಟವಾಗುತ್ತಿದೆ. ಜೊತೆಗೆ ಮೊಸರು, ಪನೀರ್, ತುಪ್ಪ, ಸಿಹಿ ಉತ್ಪನ್ನಗಳು, ಸುವಾಸಿತ ಹಾಲು, ಮಜ್ಜಿಗೆ ಮತ್ತು ಲಸ್ಸಿ ಮಾರಾಟವಾಗುತ್ತಿದ್ದು, ದಿನಕ್ಕೆ ಸರಾಸರಿ ರೂ.3.03 ಕೋಟಿ ವ್ಯವಹಾರ ನಡೆಯುತ್ತಿದೆ ಎಂದರು.
ನವೀನ ಯಂತ್ರೋಪಕರಣಗಳು, ನೂತನ ಗೋಡೌನ್, ಐಸ್ ಕ್ರೀಂ ಕೋಲ್ಡ್ ಸ್ಟೋರೇಜ್ ಮತ್ತು ರೆಫ್ರಿಜರೇಶನ್ ಘಟಕಗಳನ್ನು ರೂ.12.81 ಕೋಟಿಯಲ್ಲಿ ನಿರ್ಮಿಸಿ ಬಳಸಲಾಗುತ್ತಿದೆ. ಮಂಗಳೂರು ಕೇಂದ್ರ ಕಚೇರಿಯಲ್ಲಿ ರೂ.7 ಕೋಟಿ ವೆಚ್ಚದಲ್ಲಿ ಗೋಡೌನ್ ಮತ್ತು ಉಡುಪಿ ಡೇರಿಯಲ್ಲಿ ರೂ.4.25 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಾಣ ಪ್ರಗತಿಯಲ್ಲಿದ್ದು, ಈ ಸಾಲಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
2026–27 ಸಾಲಿನಲ್ಲಿ ಕಡಸು ಅಭಿವೃದ್ಧಿಗೆ ರೂ.60 ಲಕ್ಷ ಮೀಸಲಿಡಲಾಗಿದ್ದು, ಮೆಗಾ ಡೇರಿ, ಐಸ್ ಕ್ರೀಂ ಪ್ಲಾಂಟ್, ಪನೀರ್ ಘಟಕ ಮತ್ತು ನೀರು ಬಾಟ್ಲಿಂಗ್ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುಚರಿತ ಶೆಟ್ಟಿ ಮಮತಾ ಶೆಟ್ಟಿ,ಸುಧಾಕರ್ ಶೆಟ್ಟಿ,ಹಾಗೂ ಇನ್ನಿತರು ಉಪಸ್ಥಿತರಿದ್ದರು


