ಮಂಗಳೂರು : ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ (ರಿ), ಮಂಗಳೂರು ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗ್ಯಾರೇಜ್ ಮಾಲಕರು ಮತ್ತು ನೌಕರರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವು ಎಕ್ಕೂರಿನ ಮೀನುಗಾರಿಕಾ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೀನುಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮನೋಜ್ ಕುಮಾರ್ ಅವರು, “ಆರೋಗ್ಯವೇ ಸಂಪತ್ತು; ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ” ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಭರತ್ ಕುಮಾರ್, ರಿಲಾಯನ್ಸ್ ಲುಬ್ರಿಕೆಂಟ್ಸ್ ಮಂಗಳೂರು ಮಾಲಕರಾದ ಮೊಹಮ್ಮದ್ ಆಲಿ, ನೆಹರು ಯುವ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ., ಸಂಘದ ಅಧ್ಯಕ್ಷ ದಿನಕರ ಕುಲಾಲ್, ಚೇರ್ಮನ್ ಜನಾರ್ಧನ್ ಎ., ಕೋಶಾಧಿಕಾರಿ ಕಿರಣ್ ರಾಜ್, ಉಪಾಧ್ಯಕ್ಷರಾದ ಅಬ್ದುಲ್ ಮೊಯ್ದಿನ್ ಕಾರ್ಕಳ ಹಾಗೂ ಸತೀಶ್ ಗಟ್ಟಿ ಉಪಸ್ಥಿತರಿದ್ದರು. ಜಿಎಂಎಸ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಮುರಳಿ ಕೃಷ್ಣ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಂದ್ಯಾಟದಲ್ಲಿ ಟೀಮ್ ಜಿಎಂಎಸ್ ಮಂಗಳೂರು ತಂಡ ಪ್ರಥಮ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಗೆದ್ದುಕೊಂಡರೆ, “ನಮ್ಮ ಕುಡ್ಲ ಮಂಗಳೂರು” ತಂಡ ದ್ವಿತೀಯ ಬಹುಮಾನ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎ. ರಾಜ್ ಗೋಪಾಲ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಸಲಹೆಗಾರ ಕೃಷ್ಣ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.


