ಬೆಂಗಳೂರು : ಯಶವಂತಪುರ–ಮಂಗಳೂರು ನಡುವೆ ಸಂಚರಿಸಲು ಉದ್ದೇಶಿಸಲಾಗಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ರದ್ದುಪಡಿಸಲಾಗಿದೆ. ಈ ಕುರಿತು ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರ (CPTM) ಕಚೇರಿಯು ಅಧಿಕೃತ ಆದೇಶ ಹೊರಡಿಸಿದೆ.
ಮೇ 31ರಂದು ಬಿಡುಗಡೆಗೊಂಡ ಸಂದೇಶ ಸಂಖ್ಯೆ T.454/YPR-MAQ ವಂದೇ ಭಾರತ್/2026-27(241) ಪ್ರಕಾರ, ಜೂನ್ 3ರಂದು ಯಶವಂತಪುರದಿಂದ ಮಂಗಳೂರಿಗೆ ತೆರಳಿ ಅದೇ ದಿನ ವಾಪಸ್ ಬರುವಂತೆ ನಿಗದಿಪಡಿಸಿದ್ದ ಟ್ರಯಲ್ ರನ್ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ರೈಲಿನ ಪ್ರಾಯೋಗಿಕ ಸಂಚಾರಕ್ಕಾಗಿ ಕೈಗೊಳ್ಳಲಾಗಿದ್ದ ಎಲ್ಲಾ ಕಾರ್ಯಾಚರಣಾ ಸಿದ್ಧತೆಗಳು ಹಾಗೂ ಸಂಬಂಧಿತ ವ್ಯವಸ್ಥೆಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಟ್ರಯಲ್ ರನ್ ಮೂಲಕ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸೇವೆ ಆರಂಭಿಸುವ ಸಾಧ್ಯತೆಗಳ ಕುರಿತು ನಿರೀಕ್ಷೆ ಮೂಡಿತ್ತು. ಆದರೆ ಅನಿರೀಕ್ಷಿತವಾಗಿ ಟ್ರಯಲ್ ರನ್ ರದ್ದುಗೊಂಡಿರುವುದು ಪ್ರಯಾಣಿಕರು ಹಾಗೂ ರೈಲು ಅಭಿಮಾನಿಗಳಲ್ಲಿ ನಿರಾಸೆ ಉಂಟುಮಾಡಿದೆ.
ರದ್ದತಿಯ ಹಿಂದಿನ ನಿಖರ ಕಾರಣವನ್ನು ರೈಲ್ವೆ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಹೊಸ ವೇಳಾಪಟ್ಟಿ ಅಥವಾ ಪರಿಷ್ಕೃತ ಯೋಜನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


