Sunday, June 14, 2026
Flats for sale
Homeದೇಶಬೆಂಗಳೂರು : ಕೇರಳದಲ್ಲಿ ಶಿಗೆಲ್ಲೋಸಿಸ್ ವೈರಸ್ ಆತಂಕ : ಗಡಿಭಾಗ ಜಿಲ್ಲೆಗಳಲ್ಲಿ ಕಟ್ಟೆಚ್ಚರ, ನಿರ್ಲಕ್ಷ್ಯ ವಹಿಸಿದರೆ...

ಬೆಂಗಳೂರು : ಕೇರಳದಲ್ಲಿ ಶಿಗೆಲ್ಲೋಸಿಸ್ ವೈರಸ್ ಆತಂಕ : ಗಡಿಭಾಗ ಜಿಲ್ಲೆಗಳಲ್ಲಿ ಕಟ್ಟೆಚ್ಚರ, ನಿರ್ಲಕ್ಷ್ಯ ವಹಿಸಿದರೆ ಮಕ್ಕಳ ಜೀವಕ್ಕೆ ಕಂಟಕ : ತಜ್ಞ ವೈದ್ಯರ ಎಚ್ಚರಿಕೆ.

ಬೆಂಗಳೂರು : ನೆರೆಯ ಕೇರಳ ರಾಜ್ಯದಲ್ಲಿ ಶಿಗೆಲ್ಲೋಸಿಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಗಡಿಭಾಗ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದೆ. ವಿಶೇಷವಾಗಿ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ನಿಗಾ ಹೆಚ್ಚಿಸಲಾಗಿದ್ದು, ಆರೋಗ್ಯ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕೋಝಿಕೋಡ್ ಸೇರಿದಂತೆ ಕೇರಳದ ಹಲವು ಭಾಗಗಳಲ್ಲಿ ಶಾಲಾ ಮಕ್ಕಳಲ್ಲಿ ಶಿಗೆಲ್ಲೋಸಿಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿನ ಹರಡುವಿಕೆ ಆರೋಗ್ಯ ಇಲಾಖೆಗೆ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.

ವೈದ್ಯರ ಪ್ರಕಾರ, ಶಿಗೆಲ್ಲೋಸಿಸ್ ಯಾವುದೇ ವೈರಸ್ ಸೋಂಕಲ್ಲ. ಇದು ಶಿಗೆಲ್ಲಾ (Shigella) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಲುಷಿತ ನೀರು, ಆಹಾರ ಹಾಗೂ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಈ ಸೋಂಕು ವೇಗವಾಗಿ ಹರಡುತ್ತದೆ.

ಮಕ್ಕಳಿಗೆ ಹೆಚ್ಚು ಅಪಾಯ

ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚು. ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕ ಡಾ. ಲಕ್ಷ್ಮೀಪತಿ ಮಾತನಾಡಿ, “ಮಕ್ಕಳಲ್ಲಿ ಜ್ವರ, ಅತಿಸಾರ ಅಥವಾ ವಾಂತಿಯಂತಹ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸೋಂಕು ಜೀವಕ್ಕೆ ಅಪಾಯಕಾರಿಯಾಗಬಹುದು” ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಲರ್ಟ್

ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಎಚ್ಚರಿಕೆ ಸೂಚನೆ ನೀಡಿದೆ. ಗಡಿಭಾಗ ಪ್ರದೇಶಗಳಲ್ಲಿ ತಪಾಸಣೆ ಹಾಗೂ ನಿಗಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಮಕ್ಕಳಲ್ಲಿ ಸಣ್ಣ ಪ್ರಮಾಣದ ಜ್ವರ ಅಥವಾ ಅತಿಸಾರದ ಲಕ್ಷಣಗಳು ಕಂಡುಬಂದರೂ ವೈದ್ಯರ ಸಲಹೆ ಪಡೆಯುವಂತೆ ಸೂಚಿಸಿದ್ದಾರೆ.

ಶಿಗೆಲ್ಲೋಸಿಸ್ ಸೋಂಕಿನ ಪ್ರಮುಖ ಲಕ್ಷಣಗಳು
1.ತೀವ್ರ ಜ್ವರ
2.ಅತಿಯಾದ ಆಯಾಸ ಹಾಗೂ ದೌರ್ಬಲ್ಯ
3.ಹೊಟ್ಟೆ ನೋವು ಮತ್ತು ಮರುಕು
4.ನಿರಂತರ ವಾಂತಿ
5.ರಕ್ತ ಮಿಶ್ರಿತ ಅತಿಸಾರ
6.ದೇಹದಲ್ಲಿ ನೀರಿನ ಕೊರತೆ
7.ಮುನ್ನೆಚ್ಚರಿಕೆ ಕ್ರಮಗಳು
8.ಕುದಿಸಿ ಆರಿಸಿದ ಶುದ್ಧ ನೀರನ್ನೇ ಬಳಸಬೇಕು
9.ಆಹಾರ ಸೇವನೆಗೆ ಮುನ್ನ ಹಾಗೂ ಶೌಚಾಲಯ ಬಳಕೆಯ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು
10.ಕಲುಷಿತ ನೀರು ಹಾಗೂ ತೆರೆದಿಟ್ಟ ಆಹಾರ ಸೇವನೆ ಮಾಡಬಾರದು
11.ಹಳಸಿದ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು
12.ಮಕ್ಕಳ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

ಸೋಂಕಿನ ಹರಡುವಿಕೆಯನ್ನು ತಡೆಯಲು ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಮತ್ತು ಸುರಕ್ಷಿತ ಆಹಾರ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular