ಸುಳ್ಯ ; ನಿನ್ನೆ ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಲ್ಲಿ ದೊಡ್ಡ ಆನೆಗಳ ಜೊತೆಗೆ ಬಿದ್ದ ಮರಿಯಾನೆಗಳಲ್ಲಿ ಒಂದು ಮರಿಯಾನೆಯನ್ನು ತಮ್ಮ ತಂಡಕ್ಕೆ ಉಳಿದ ಕಾಡಾನೆಗಳು ಸೇರಿಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.
ಆಹಾರ ಹುಡುಕುತ್ತಾ ಬಂದ ಎರಡು ದೊಡ್ಡ ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದಿದ್ದವು.ಇದರಲ್ಲಿ ಎರಡು ದೊಡ್ಡ ಕಾಡಾನೆಗಳು ಮತ್ತು ಒಂದು ಮರಿಯಾನೆ ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದೆ.ಆದರೆ ಸಂಪೂರ್ಣ ಸುಸ್ತಾಗಿದ್ದ ಸುಮಾರು 3 ತಿಂಗಳ ಒಂದು ಗಂಡು ಮರಿಯಾನೆಯೊಂದು ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರು ಸೇರಿ ಕೆರೆಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು. ಆದರೆ ಇದೀಗ ಆ ಮರಿ ತನ್ನ ತಂಡದೊಂದಿಗೆ ಸೇರಿಕೊಳ್ಳದೆ ದೂರವೇ ಉಳಿದಿದೆ. ಈ ಮರಿಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಉಳಿದ ಕಾಡಾನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಪ್ರಚಾರವಾಗಿದೆ.
ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಅವರು ಮಾತನಾಡಿ,ಪ್ರಸ್ತುತ ಮರಿ ಆನೆ ದೊಡ್ಡ ಆನೆಗಳ ಹಿಂಡಿನಿಂದ ಸುಮಾರು 200 ಮೀಟರ್ ದೂರದಲ್ಲೇ ಇದೆ. ಒಮ್ಮೆ ನಾವು ಅದನ್ನು ಆನೆ ಹಿಂಡಿನ ಬಳಿಗೆ ಕರೆದೊಯ್ದು ಬಿಟ್ಟು ಬಂದೆವು. ಆದರೆ ಅದು ಮರಳಿ ವಾಪಾಸು ಬರುತ್ತಿದೆ. ಈ ಆನೆ ಮರಿ ತನ್ನ ಗುಂಪಿನೊಂದಿಗೆ ಹೋಗಲು ಮುಂದಾಗುತ್ತಿಲ್ಲ.ಈಗಾಗಲೇ ತಜ್ಞ ವೈದ್ಯರ ಸಲಹೆಗಳನ್ನು ಪಡೆಯುತ್ತಿದ್ದೇವೆ. ಅವರ ಸಲಹೆಯಂತೆ ಕಾಡಿನ ಅಂಚಿನಲ್ಲಿ ಗುಂಪಿನಿಂದ ಬೇರೆಯಾಗಿ ಇರುವ ಮರಿಯನ್ನು ಗುಂಪಿಗೆ ಸೇರಿಸಲು ಸತತ ಪ್ರಯತ್ನ ನಡೆಸುತ್ತಿದ್ದೇವೆ.
ಮರಿಯಾನೆ ಯಾವುದೇ ಆಹಾರ ಸೇವಿಸದೇ ಇರುವುದು ಸಮಸ್ಯೆಯಾಗಿದೆ. ಅದಕ್ಕೂ ತಜ್ಞರ ಸಲಹೆ ಪಡೆಯುತ್ತಿದ್ದೇವೆ. ನಮ್ಮ ಸಿಬ್ಬಂದಿಗಳು ಆನೆ ಮರಿಯಾನೆಗೆ ಕಾವಲಾಗಿ ನಿಂತಿರುತ್ತಾರೆ. ಮರಿಯಾನೆ ಗುಂಪಿಗೆ ಸೇರಿಸಲು ಸಾಧ್ಯವೇ ಆಗದಿದ್ದರೆ ಅದನ್ನು ಯಾವುದಾದರೂ ಆನೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸಾಕುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.