ನವದೆಹಲಿ ; ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯದ ಕರೆ ನೀಡಿದ ಬೆನ್ನಲ್ಲೇ ಸ್ವತಃ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವ ಮೂಲಕ ಮಾದರಿ ನಿರ್ಮಿಸಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆ ದೇಶದಲ್ಲಿ ಇಂಧನ ಬಳಕೆ ನಿಯಂತ್ರಣಕ್ಕೆ ಜನರ ಸಹಕಾರ ಕೋರಿದ್ದ ಪ್ರಧಾನಿ ಮೋದಿ, ಕಳೆದ ಎರಡು ದಿನಗಳಿಂದ ತಮ್ಮ ವಿವಿಧ ರಾಜ್ಯಗಳ ಪ್ರವಾಸದ ವೇಳೆ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಇಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂ ಮತ್ತು ಗುಜರಾತ್ ಪ್ರವಾಸದ ಸಂದರ್ಭದಲ್ಲೂ ವಾಹನಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗಿದ್ದು, ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪ್ರಧಾನಿ ಮೋದಿ ಕೇವಲ ಒಂದು ಎಲೆಕ್ಟ್ರಿಕ್ ವಾಹನದಲ್ಲಿ ಆಗಮಿಸಿದ್ದಾಗಿ ವರದಿಯಾಗಿದೆ.
ಹೈದರಾಬಾದ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಮಿತಿಗೊಳಿಸುವುದು, ಅನಗತ್ಯ ಚಿನ್ನ ಖರೀದಿಯನ್ನು ಹಾಗೂ ಖಾದ್ಯ ತೈಲ ಬಳಕೆಯಲ್ಲಿ ನಿಯಂತ್ರಣ ತರಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ.
ಪ್ರಧಾನಿಯ ಈ ಕರೆಯ ಬಳಿಕ ಹಲವು ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರೂ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ.
ಇದೇ ವೇಳೆ ಇಂಧನ ಮತ್ತು ವಿದ್ಯುತ್ ಉಳಿತಾಯಕ್ಕಾಗಿ ಹಲವು ದೇಶಗಳು ವಿಶೇಷ ಕ್ರಮಗಳನ್ನು ಕೈಗೊಂಡಿವೆ. ದಕ್ಷಿಣ ಕೊರಿಯಾದಲ್ಲಿ ವಿದ್ಯುತ್ ಉಪಕರಣ ಬಳಕೆಗೆ ನಿಯಂತ್ರಣ ಹೇರಲಾಗಿದ್ದು, ಬಾಂಗ್ಲಾದೇಶದಲ್ಲಿ ಸಂಜೆ ಬಳಿಕ ಶಾಪಿಂಗ್ ಮಾಲ್ಗಳನ್ನು ಬಂದ್ ಮಾಡಲಾಗುತ್ತಿದೆ.
ಥಾಯ್ಲೆಂಡ್, ಮಲೇಷ್ಯಾ, ಸಿಂಗಾಪುರ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಲ್ಲಿ ಎಸಿ ಉಷ್ಣಾಂಶಕ್ಕೆ ಮಿತಿ ವಿಧಿಸಲಾಗಿದೆ.
ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಥಾಯ್ ಲ್ಯಾಂಡ್, ಮಲೇಷಿಯಾ ಹಾಗೂ ಸಿಂಗಾಪುರಾ ಸೇರಿದಂತೆ ಹಲವು ರಾಷ್ಟ್ರಗಳು ಇಂಧನ ಉಳಿತಾಯ ಕ್ರಮಗಳನ್ನು ಜಾರಿಗೊಳಿಸಿವೆ.ಗುಜರಾತ್ ರಾಜ್ಯಪಾಲ ಅಚಾರ್ಯ ದೆವ್ರಟ್ ಅವರು ಹೆಲಿಕಾಪ್ಟರ್ ಪ್ರಯಾಣ ತೊರೆದು ರೈಲು ಹಾಗೂ ರಸ್ತೆ ಮಾರ್ಗದ ಪ್ರಯಾಣಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ.


