ಸುಳ್ಯ : ತಾಲೂಕಿನ ಮಂಡೆಕೋಲು ಗ್ರಾಮದ ಜಲಸೂರು–ಮೂರೂರು ಸಮೀಪದ ದೇವರಗುಂಡ ಬೊಟ್ಟುಕಲ್ಲು ಪ್ರದೇಶದಲ್ಲಿ ನಿನ್ನೆ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ಹಲವು ಮನೆಗಳ ತೋಟಗಳಿಗೆ ಹಾನಿ ಮಾಡಿದೆ. ಕಾಡಾನೆಗಳ ಸಂಚಾರದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.




ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ತವರು ಮನೆ ಇರುವ ಪ್ರದೇಶದ ಸುತ್ತಮುತ್ತಲೂ ರಾತ್ರಿ ವೇಳೆ ಕಾಡಾನೆಗಳು ಕಾಣಿಸಿಕೊಂಡಿವೆ. ನಾಲ್ಕಕ್ಕಿಂತ ಹೆಚ್ಚು ಆನೆಗಳಿದ್ದ ಹಿಂಡು ಮಂಡೆಕೋಲು ಕಾಡು ಪ್ರದೇಶದಿಂದ ಪಯಸ್ವಿನಿ ನದಿ ದಾಟಿ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಏಳೆಂಟು ಮನೆಗಳ ತೋಟಗಳಿಗೆ ನುಗ್ಗಿದ ಆನೆಗಳು ಬೆಳೆಗಳಿಗೆ ಹಾನಿ ಮಾಡಿವೆ ಎನ್ನಲಾಗಿದೆ. ದಾಳಿ ನಡೆಸಿದ ಬಳಿಕ ಆನೆಗಳು ಮತ್ತೆ ಪಯಸ್ವಿನಿ ನದಿ ದಾಟಿ ಕಾಡಿನತ್ತ ತೆರಳಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ನಿರಂತರ ಆನೆಗಳ ಸಂಚಾರ ಮಂಡೆಕೋಲು ಕಾಡು ಪ್ರದೇಶದಲ್ಲಿರುವ ಕಾಡಾನೆಗಳ ತಂಡವೇ ಜಲಸೂರು–ಪಂಜಿಕಲ್ಲು–ಮೂರೂರು–ಮುಳ್ಳೇರಿಯ ರಸ್ತೆಯ ಎಡಭಾಗ ಹಾಗೂ ಪಯಸ್ವಿನಿ ನದಿಯ ಬಲಭಾಗದಲ್ಲಿರುವ ಜನವಸತಿ ಪ್ರದೇಶಗಳಿಗೆ ಬರುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾಡಾನೆಗಳ ನಿರಂತರ ಸಂಚಾರದಿಂದಾಗಿ ಈ ಭಾಗದ ನಿವಾಸಿಗಳು ರಾತ್ರಿ ವೇಳೆ ಮನೆಯಿಂದ ಹೊರಬರಲು ಆತಂಕಪಡುವಂತಾಗಿದೆ. ಆನೆಗಳ ಚಲನವಲನದಿಂದ ಬೆಳೆಗಾರರಲ್ಲಿಯೂ ಆತಂಕ ಹೆಚ್ಚಾಗಿದೆ.
ಅರಣ್ಯ ಇಲಾಖೆಗೆ ಸ್ಥಳೀಯರ ಒತ್ತಾಯ ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ತಡೆಗಟ್ಟಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸುವುದರ ಜೊತೆಗೆ, ಸ್ಥಳೀಯರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

