ಬಳ್ಳಾರಿ : ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಆಫ್ರೀನ್ ಬಾನು (22) ಅವರನ್ನು ಪತಿ ನೂರ್ ಅಹ್ಮದ್ (25) ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೇ 21ರಂದು ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಫ್ರೀನ್ ಮನೆಗೆ ಬಂದಿದ್ದ ನೂರ್ ಅಹ್ಮದ್, ಪತ್ನಿ ಹಾಗೂ ಮಗನೊಂದಿಗೆ ಕೇಕ್ ಕತ್ತರಿಸಿ ಬಳಿಕ ಊಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಆದರೆ ಆಫ್ರೀನ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದರು.
ಕುಟುಂಬದವರು ಪ್ರಶ್ನಿಸಿದಾಗ ತನಗೆ ಏನೂ ಗೊತ್ತಿಲ್ಲವೆಂದು ನೂರ್ ಅಹ್ಮದ್ ಹೇಳಿಕೊಂಡಿದ್ದ. ಬಳಿಕ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು.
ಇದೀಗ ಬಳ್ಳಾರಿ ಜಿಲ್ಲೆಯ ಕುಡತಿನಿ ತಾಲೂಕಿನ ವೇಣಿವೀರಾಪುರ ಸಮೀಪ ಕೊಳೆತ ಸ್ಥಿತಿಯಲ್ಲಿ ಆಫ್ರೀನ್ ಮೃತದೇಹ ಪತ್ತೆಯಾಗಿದೆ.
ತನಿಖೆ ವೇಳೆ ಪತ್ನಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಅಲ್ಲಿ ಎಸೆದು ಬಂದಿದ್ದಾನೆ ಎಂಬುದು ಬಹಿರಂಗವಾಗಿದೆ. ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ನೂರ್ ಅಹ್ಮದ್ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


