ಚಿಕ್ಕಮಗಳೂರು : ನಡು ರಸ್ತೆಯಲ್ಲೇ ಎಲೆಕ್ಟ್ರಿಕ್ ಬೈಕ್ವೊಂದು ಏಕಾಏಕಿ ಧಗಧಗನೆ ಹೊತ್ತಿ ಉರಿದ ಘಟನೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಂಚನಹಳ್ಳಿ ಗ್ರಾಮದ ನಂದೀಶ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಸುಮಾರು ಒಂದೂವರೆ ವರ್ಷದ ಹಿಂದೆ ಹುಳಿಯಾರದಿಂದ ಸೆಕೆಂಡ್ಹ್ಯಾಂಡ್ ಆಗಿ ಬೈಕ್ ಖರೀದಿಸಿದ್ದರು ಎನ್ನಲಾಗಿದೆ. ನಂದೀಶ್ ಅವರು ತೋಟದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕ್ನಿಂದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಬೈಕ್ನಿಂದ ಕೆಳಗಿಳಿದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆ ಮಧ್ಯೆಯೇ ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣ ನೀರು ಸಿಗದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನೀರಿಗಾಗಿ ನಂದೀಶ್ ಹುಡುಕಾಡುವಷ್ಟರಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

