ಬೆಂಗಳೂರು ; ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಲೋಕಾಯುಕ್ತಕ್ಕೆ ಪ್ರಕರಣಗಳು ಮತ್ತು ಕಡತಗಳನ್ನು ವರ್ಗಾಯಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸುಮಾರು 1,400 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಕರ್ನಾಟಕ ಲೋಕಾಯುಕ್ತದ ಅಂಕಿಅಂಶಗಳ ಪ್ರಕಾರ, 235 ಪ್ರಕರಣಗಳೊಂದಿಗೆ, ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಎಸಿಬಿಯಲ್ಲಿ ಬಾಕಿ ಉಳಿದಿವೆ. ಬೆಳಗಾವಿ (63 ಪ್ರಕರಣಗಳು) ಮತ್ತು ತುಮಕೂರು (53 ಪ್ರಕರಣಗಳು) ನಂತರದ ಸ್ಥಾನದಲ್ಲಿವೆ. ಇತರ ಜಿಲ್ಲೆಗಳಲ್ಲಿ ತುಲನಾತ್ಮಕವಾಗಿ ಕಡಿಮೆ ಪ್ರಕರಣಗಳಿವೆ.
ಈ ಪೈಕಿ ಹಲವು ಪ್ರಕರಣಗಳು ಎಸಿಬಿಯಲ್ಲಿ ವರ್ಷಗಳಿಂದ ಬಾಕಿ ಉಳಿದಿದ್ದು, ತನಿಖೆಯನ್ನು ತ್ವರಿತಗೊಳಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.
“ತನಿಖೆಯನ್ನು ಯಾವ ಹಂತದಲ್ಲಿ ನಿಲ್ಲಿಸಲಾಗಿದೆ ಮತ್ತು ಹಿಂದೆ ದಾಖಲಿಸಿದ ಸಾಕ್ಷ್ಯವನ್ನು ಅಧ್ಯಯನ ಮಾಡುವುದು ಮುಖ್ಯ. ಪ್ರಕರಣಗಳ ಪ್ರಕಾರವನ್ನು ಆಧರಿಸಿ ಲಭ್ಯವಿರುವ ಸಿಬ್ಬಂದಿಗೆ ಈ ಪ್ರಕರಣಗಳನ್ನು ಮರು ನಿಯೋಜಿಸಲು ನಾವು ಆಂತರಿಕ ಸಮಿತಿಯನ್ನು ರಚಿಸಿದ್ದೇವೆ. ತನಿಖೆ ಶೀಘ್ರವೇ ವೇಗ ಪಡೆಯಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ತನಿಖೆ ಆರಂಭಿಸುವ ಮುನ್ನ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದರು.
“ಪೇಪರ್ಗಳು ಅಥವಾ ಫೈಲ್ಗಳು ಪ್ರಕರಣದ ಎಲ್ಲಾ ಅಂಶಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಅವುಗಳನ್ನು ವಿವರವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಜವಾಬ್ದಾರಿಗಳನ್ನು ನಿಗದಿಪಡಿಸಲು ಮತ್ತು ಪ್ರಕರಣಗಳನ್ನು ನಿಯೋಜಿಸಲು ನಾವು ಎಲ್ಲಾ ಜಿಲ್ಲೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ (ಎಡಿಜಿಪಿ) ಪ್ರಕರಣದ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಅದಕ್ಕೆ ಅನುಗುಣವಾಗಿ ವಿತರಿಸುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪಾಟೀಲ್ ಹೇಳಿದರು.
ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲಾಗಿದ್ದರೂ, ರಾಜ್ಯ ಸರ್ಕಾರವು ಎಸಿಬಿಯ 50% ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಮಾತ್ರ ಅನುಮೋದನೆ ನೀಡಿದ್ದು, ಹೆಚ್ಚಿನ ಸಿಬ್ಬಂದಿಯನ್ನು ಕೋರಲು ಅಧಿಕಾರಿಗಳು ಈಗ ಚಿಂತನೆ ನಡೆಸಿದ್ದಾರೆ.
”ಭ್ರಷ್ಟಾಚಾರ ತಡೆ ಕಾಯಿದೆಯಡಿ ಬಂದಿರುವ ದೂರುಗಳ ಬಗ್ಗೆ ನಾವು ಸಕ್ರಿಯವಾಗಿ ದಾಳಿ ನಡೆಸುತ್ತಿದ್ದೇವೆ ಮತ್ತು ಕ್ರಮ ಕೈಗೊಳ್ಳುತ್ತಿದ್ದೇವೆ. ಅನುಮೋದಿತ ಸಂಖ್ಯೆಯ ಸಿಬ್ಬಂದಿಯೊಂದಿಗೆ, ಬಾಕಿ ಇರುವ ಪ್ರಕರಣಗಳ ತನಿಖೆ ಮತ್ತು ಹೊಸ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಕಷ್ಟವಾಗುತ್ತದೆ. ನಾವು ಅಗತ್ಯವನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಸರ್ಕಾರಕ್ಕೆ ವಿನಂತಿಯನ್ನು ಕಳುಹಿಸುತ್ತೇವೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಹೈಕೋರ್ಟ್, ಆಗಸ್ಟ್ 2022 ರಲ್ಲಿ, ರಾಜ್ಯ ಸರ್ಕಾರವು 2016 ರಲ್ಲಿ ರಚಿಸಿದ್ದ ಎಸಿಬಿಯನ್ನು ರದ್ದುಗೊಳಿಸಿತು ಮತ್ತು ನಡೆಯುತ್ತಿರುವ ಎಲ್ಲಾ ತನಿಖೆಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ನಿರ್ದೇಶಿಸಿತು.