ಮಂಗಳೂರುv: ಇ-ಸ್ವತ್ತು 2.0 ತಂತ್ರಾಂಶದ ವೈಫಲ್ಯದಿಂದ ನಮೂನೆ 11ಎ ಮತ್ತು 11ಬಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಗ್ರಾಮೀಣ ಭಾಗದ ಆಸ್ತಿ ಮಾಲೀಕರು, ರೈತರು ಹಾಗೂ ಬಡ ಕುಟುಂಬಗಳು ಮನೆ ನಿರ್ಮಾಣಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಡಿಸೆಂಬರ್ 1ರಿಂದ ಇ-ಸ್ವತ್ತು 2.0 ಜಾರಿಯಾದ ಬಳಿಕ 11ಎ ಅಡಿಯಲ್ಲಿ 1,84,222 ಅರ್ಜಿಗಳು ಸಲ್ಲಿಕೆಯಾಗಿದ್ದು, 23,802 ಅರ್ಜಿಗಳು ಅನುಮೋದನೆಗೆ ಬಾಕಿ ಇವೆ. 639 ಅರ್ಜಿಗಳು ತಿರಸ್ಕೃತವಾಗಿವೆ ಎಂದರು. 11ಬಿ ಅಡಿಯಲ್ಲಿ 15,936 ಅರ್ಜಿಗಳಲ್ಲಿ 8,892 ಅರ್ಜಿಗಳು ಬಾಕಿ ಉಳಿದಿವೆ. ದಕ್ಷಿಣ ಕನ್ನಡದಲ್ಲಿ 65 ಹಾಗೂ ಉಡುಪಿ ಜಿಲ್ಲೆಯಲ್ಲಿ 436 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಎಂದು ತಿಳಿಸಿದರು. ಅಧಿಕಾರ ಕೇಂದ್ರೀಕರಣಕ್ಕೆ ಆಕ್ಷೇಪ 11ಎ ಮತ್ತು 11ಬಿ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಕಡತಗಳು ವಿಳಂಬವಾಗುತ್ತಿವೆ. ಗ್ರಾಮೀಣ ಜನರು ಸಣ್ಣ ಕೆಲಸಕ್ಕೂ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವಂತಾಗಿದೆ ಎಂದು ಕಿಶೋರ್ ಕುಮಾರ್ ದೂರಿದರು.
ಸರ್ವರ್ ದೋಷದಿಂದ ನಿಗದಿತ 15 ದಿನಗಳ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಡಿಜಿಟಲೀಕರಣದ ಮಾತಿನ ನಡುವೆಯೂ ಕಚೇರಿಗಳಲ್ಲಿ ಭೌತಿಕ ಕಡತಗಳನ್ನು ಹಿಡಿದುಕೊಂಡು ಬರುವಂತೆ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
11ಎ, 11ಬಿ ಅಧಿಕಾರವನ್ನು ಮರಳಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ನೀಡಿ, ಇ-ಸ್ವತ್ತು 2.0 ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

