ಪುತ್ತೂರು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪೊಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಅದ್ದು ಪಡೀಲ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದು ಐದು ದಿನಗಳಾದರೂ ಆರೋಪಿಯ ಬಂಧನವಾಗಿಲ್ಲ ಎಂದು ಆರೋಪಿಸಿದರು. ಶಾಸಕ ಅಶೋಕ್ ರೈ ಅವರು ಆರೋಪಿಯ ವಿಚಾರದಲ್ಲಿ ಮೃದು ಧೋರಣೆ ತಾಳುತ್ತಿದ್ದಾರೆ ಎಂದು ಹಕೀಂ ಕೂರ್ನಡ್ಕ ಆರೋಪಿಸಿದರು. “ಬೇರೆಲ್ಲ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಸ್ಟ್ರಾಂಗ್ ಆಗಿದೆ. ಆದರೆ ಅದ್ದು ಪಡೀಲ್ ಪ್ರಕರಣದಲ್ಲಿ ವೀಕ್ ಆಗಿದೆ” ಎಂದು ಅವರು ಟೀಕಿಸಿದರು.
ಅದ್ದು ಪಡೀಲ್ ಅವರು ಈ ಹಿಂದೆ ನಗರಸಭೆ ಅಧ್ಯಕ್ಷೆಗೆ ಹಾಗೂ ಮಹಿಳೆಯೊಬ್ಬರಿಗೆ ನಿಂದನೆ ಮಾಡಿದ್ದರೂ, ಶಾಸಕ ಅಶೋಕ್ ರೈ ಅವರ ಪ್ರಭಾವದಿಂದ ಜಾಮೀನು ದೊರಕಿತು ಎಂದು ಹಕೀಂ ಆರೋಪಿಸಿದರು. ಕಳೆದ ಒಂದು ವರ್ಷದ ಹಿಂದೆ ಅದ್ದು ಪಡೀಲ್ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಬಿಡುಗಡೆಯಾದ ಸಂದರ್ಭದಲ್ಲೂ ಶಾಸಕರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ದೂರಿದರು.
“ಇದೀಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಬಂಧನವಾಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿಯನ್ನು ಬಂಧಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಬೆಂಗಳೂರಿನ ಶಾಸಕರ ಭವನದಲ್ಲಿರುವ ಅಶೋಕ್ ರೈ ಅವರ ನಿವಾಸ ಸೇರಿದಂತೆ ಪುತ್ತೂರಿನ ಕಾಂಗ್ರೆಸ್ ನಾಯಕರ ಮನೆಗಳಲ್ಲೂ ಶೋಧ ನಡೆಸಬೇಕು ಎಂದು ಹಕೀಂ ಕೂರ್ನಡ್ಕ ಒತ್ತಾಯಿಸಿದರು.
ಆರೋಪಿಗೆ ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಆಶ್ರಯ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು. ಅಲ್ಲದೆ, ಅದ್ದು ಪಡೀಲ್ ಅವರನ್ನು ಕೋಮುಗಲಭೆಗೆ ಹುನ್ನಾರ ಮಾಡುವ ವ್ಯಕ್ತಿ ಎಂದು ಆರೋಪಿಸಿ, ಅವರೊಂದಿಗೆ ಶಾಸಕರು ಒಡನಾಟ ಹೊಂದಿರುವುದನ್ನು ಪ್ರಶ್ನಿಸಿದರು.

