ಯಾದಗಿರಿ : ಗಂಡ-ಹೆಂಡತಿ ನಡುವಿನ ಜಗಳದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯಾದಗಿರಿ ಜಿಲ್ಲೆಯ ಗೋಗಿ (ಕೆ) ಗ್ರಾಮದ ಕಾಲುವೆಯಲ್ಲಿ ಈ ಘಟನೆ ನಡೆದಿದೆ.
ಶಾಂತಪ್ಪ ಎಂಬಾತ ತನ್ನ ಮಕ್ಕಳಾದ ಸಾನ್ವಿ ಹಾಗೂ ಸೃಜನ್ರನ್ನು ಕಾಲುವೆಗೆ ಎಸೆದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಕಾಲುವೆಯಲ್ಲಿ ಮಕ್ಕಳಿಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ವೇಳೆ ಮತ್ತೊಬ್ಬ ಮಗಳಾದ ಸಂಜನಾಳನ್ನು ಕಾಲುವೆಗೆ ಎಸೆಯದೆ ಬಚಾವ್ ಮಾಡಲಾಗಿದೆ.
ಬಳಿಕ ಸಂಜನಾ, ತಂದೆ ಮಾಡಿದ ಕೃತ್ಯವನ್ನು ತಾಯಿ ರೇಣುಕಾ ಅವರ ಮುಂದೆ ಎಳೆಎಳೆಯಾಗಿ ವಿವರಿಸಿದ್ದಾಳೆ. ಮಗಳ ಹೇಳಿಕೆ ಕೇಳಿ ತಾಯಿ ರೇಣುಕಾ ಆಘಾತಕ್ಕೊಳಗಾಗಿದ್ದಾರೆ. ಘಟನೆ ಕುರಿತು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಗಂಡ-ಹೆಂಡತಿ ನಡುವಿನ ಜಗಳವೇ ಕೃತ್ಯಕ್ಕೆ ಕಾರಣವಾಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.

