ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಿನಿಮೀಯ ಶೈಲಿಯ ಪೊಲೀಸ್ ಚೇಸಿಂಗ್ ನಡೆದಿದ್ದು, ಸರಣಿ ದನ ಕಳ್ಳತನ ಪ್ರಕರಣದ ಶಂಕಿತರು ಪೊಲೀಸರ ಬೆನ್ನಟ್ಟುವಿಕೆಯಿಂದ ತಪ್ಪಿಸಿಕೊಳ್ಳಲು ಕಾರು ಬಿಟ್ಟು ದಟ್ಟ ಅರಣ್ಯಕ್ಕೆ ನುಗ್ಗಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಆಗುಂಬೆ ಭಾಗದಲ್ಲಿ ಸರಣಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರು ಕಾರಿನಲ್ಲಿ ಸಂಚರಿಸುತ್ತಿರುವ ಮಾಹಿತಿ ಪಡೆದ ಆಗುಂಬೆ ಪೊಲೀಸರು ಅವರನ್ನು ತಡೆಯಲು ಮುಂದಾದರು. ಆದರೆ ಪೊಲೀಸರು ವಾಹನ ತಡೆಯಲು ಯತ್ನಿಸಿದಾಗ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿ ರಿಪ್ಪನ್ಪೇಟೆ ಮಾರ್ಗವಾಗಿ ಪರಾರಿಯಾಗಲು ಪ್ರಯತ್ನಿಸಿದರು.
ಇದಾದ ಬಳಿಕ ಆಗುಂಬೆಯಿಂದ ಬೆನವಳ್ಳಿವರೆಗೆ ಪೊಲೀಸರು ಸೈರನ್ ಮೊಳಗಿಸುತ್ತಾ ಶಂಕಿತರ ಕಾರನ್ನು ಬೆನ್ನಟ್ಟಿದರು. ಕೆಲ ದೂರದ ಬಳಿಕ ಆರೋಪಿಗಳು ರಸ್ತೆಬದಿಯಲ್ಲಿ ಕಾರು ಬಿಟ್ಟು ದಟ್ಟ ಅರಣ್ಯದೊಳಗೆ ಓಡಿ ತಪ್ಪಿಸಿಕೊಂಡಿದ್ದಾರೆ.
ಪೊಲೀಸರು ಸ್ಥಳದಲ್ಲೇ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಕಾಡಿನಲ್ಲಿ ಅಡಗಿರುವ ಮೂವರು ಶಂಕಿತರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ.
ಪ್ರಕರಣದ ಕುರಿತು ಆಗುಂಬೆ ಪೊಲೀಸರು ತನಿಖೆ ಮುಂದುವರಿಸಿದ್ದು, ಶಂಕಿತರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.


