ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಸೋಮವಾರ ತಡರಾತ್ರಿ ಮತ್ತೋರ್ವ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಇದು 24 ತಾಸುಗಳಲ್ಲಿ ನಡೆದ 2ನೇ ಹತ್ಯೆಯಾಗಿದ್ದು, ಮೂರು ವಾರಗಳಲ್ಲಿ ಒಟ್ಟು ಆರು ಜನರು ದುಷ್ಕರ್ಮಿಗಳ ಅಟಾಟೋಪಕ್ಕೆ ಬಲಿಯಾದಂತಾಗಿದೆ.
ಮೃತ ವ್ಯಕ್ತಿಯನ್ನು ನರಸಿಂಗ್ಲಿ ಜಿಲ್ಲೆಯ ದಿನಸಿ ಅಂಗಡಿ ಮಾಲಕ ಸರತ್ ಮಣಿ ಚಕ್ರವರ್ತಿ (40) ಎಂದು ಗುರುತಿಸ ಲಾಗಿದೆ. ಸೋಮವಾರ ರಾತ್ರಿ 10ರ ಸುಮಾರಿಗೆ ಸರತ್ ತಮ್ಮ ಅಂಗಡಿಯಲ್ಲಿದ್ದ ವೇಳೆ ಗುಂಪೊಂದು ಚೂಪಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ಅವರು ಗಂಭೀರ ವಾಗಿ ಗಾಯಗೊಂಡಿದ್ದರು.
ಇದರೊಂದಿಗೆ ಕಳೆದ 35 ದಿನದ ಅವಧಿಯಲ್ಲಿ 11 ಹಿಂದುಗಳ ಹತ್ಯೆ ನಡೆದಂತಾಗಿದೆ. ಸೋಮವಾರ ಸಂಜೆ ಖುಲ್ಲಾ ವಿಭಾಗದಲ್ಲಿ ಐಸ್ ತಯಾರಿಕಾ ಕಾರ್ಖಾನೆ ಮಾಲೀಕರಾಗಿದ್ದ ರಾಣಾ ಪ್ರತಾಪ್ ಬೈರಾಗಿಯ ತಲೆಗೆ ಗುಂಡು ಹಾರಿಸಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಇದಾದ ಕೆಲವೇ ಗಂಟೆಗಳ ಅವಧಿಯಲ್ಲಿ ನರಸಿಂಗ್ಲಿ ಜಿಲ್ಲೆಯ ಪಲಾಶ್ ಉಪ ಜಿಲ್ಲಾ ಪ್ರದೇಶದ ಚಾರ್ಸಿಂದೂರ್ ಬಜಾರ್ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಶರತ್ ಮಣಿ ಚಕ್ರವರ್ತಿಯನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಈ ಎರಡು ಕೊಲೆಗಳಿಂದಾಗಿ ಬಾಂಗ್ಲಾ ಹಿಂದೂಗಳು ತೀವ್ರ ಆತಂಕಕ್ಕೀಡಾಗಿದ್ದಾರೆ.
ಭಾರತ ತೀವ್ರ ಕಳವಳ
ಹಿಂದೂಗಳ ವಿರುದ್ಧ ಹಿಂಸಾಚಾರದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಾಂತರ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾಕರ ವಿರುದ್ಧದಾಳಿ ನಡೆಸಲಾದ 2,900ಕ್ಕೂ ಹೆಚ್ಚುಘಟನೆಗಳು ವರದಿಯಾಗಿದ್ದು, ಇದು ಅತೀವ ಆತಂಕಕಾರಿ. ಈ ಘಟನೆಗಳನ್ನು ಮಾಧ್ಯಮಗಳ ಉತ್ತೇಕ್ಷೆ ಅಥವಾ ರಾಜಕೀಯ ವೈಷಮ್ಯ ಎಂದು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಇತ್ತೀಚೆಗೆ ತಿಳಿಸಿದ್ದರು.


