ಮಂಗಳೂರು ; ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಚಿನ್ನಯ್ಯ ಅಲಿಯಾಸ್ ಮುಸುಕುಧಾರಿಯನ್ನೇ ಪ್ರಥಮ ಆರೋಪಿ (ಎ-1)ಯನ್ನಾಗಿ ಮಾಡಿ ಎಸ್ಐಟಿ ಪ್ರಕರಣ ದಾಖಲಿಸಿ ಕೊಂಡಿದೆ ಎಂದು ತಿಳಿದು ಬಂದಿದೆ.
ಇದರ ನಡುವೆ ಅನನ್ಯಾ ಭಟ್ ನಾಪತ್ತೆ ಕುರಿತು ಗೊಂದಲಕಾರಿ ಹೇಳಿಕೆ ನೀಡಿದ್ದ ಸುಜಾತಾ ಭಟ್ ಮೂರನೇ ದಿನವೂ ಎಸ್ಐಟಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಎದುರಿಸಲಾಗದೇ ಹೈರಾಣಾಗಿರುವ ಇವರು, ದೂರು ವಾಪಸ್ ಪಡೆಯುತ್ತೇನೆ, ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರಿಡುತ್ತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. ವಿಚಾರಣೆ ವೇಳೆ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ಹೆಸರನ್ನೂಇವರು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಆದರೆ ತನಿಖೆ ವೇಳೆ ಚಿನ್ನಯ್ಯ ತೋರಿಸಿದ ಬಹುತೇಕ ಯಾವ ಜಾಗದಲ್ಲೂ ಏನೂ ಸಿಕ್ಕಿರಲಿಲ್ಲ. ಹಾಗಾಗಿ ಸುಳ್ಳು ಮಾಹಿತಿ ಮೂಲಕ ಚಿನ್ನಯ್ಯ ಇಡೀ ವ್ಯವಸ್ಥೆಯನ್ನು ಗೊಂದಲಕ್ಕೆ ಸಿಲುಕಿಸಿದ್ದಾನೆ ಎಂದು ಈಗ ಆರೋಪಿಸಲಾಗುತ್ತಿದೆ. ನ್ಯಾಯಾಧೀಶರ ಮುಂದೆ ಸೆಕ್ಷನ್ 164ಅಡಿಯಲ್ಲಿ ಚಿನ್ನಯ್ಯ ಹೇಳಿಕೆ ದಾಖಲಿಸಿ, ಎಸ್ಐಟಿ ತನಿಖೆ ವೇಳೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ.
ಇದನ್ನು ನ್ಯಾಯಾಲಯದ ಗಮನಕ್ಕೆ ತಂದು ಈ ಆಧಾರದಲ್ಲಿ ಈಗ ತನಿಖೆ ನಡೆಯುತ್ತಿದೆ. ಮಹಜರು ಪೂರ್ಣ: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿದ್ದ ಚಿನ್ನಯ್ಯನಿಗೆ ಸೇರಿದ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ಪ್ರಕ್ರಿಯೆ ಪೂರ್ಣಗೊಳಿಸ ಲಾಗಿದೆ. ಚಿನ್ನಯ್ಯನ ವಿರುದ್ದ ಪ್ರಕರಣ ದಾಖಲಾಗಿದ್ದರೂ ಈತನಿಗೆ ನೀಡಿರುವ ಸಾಕ್ಷಿ ಸಂರಕ್ಷಣೆ ಭದ್ರತೆ ಮುಂದು ವರೆದಿದೆ. ಈ ಅಂಶವನ್ನು ನ್ಯಾಯಾಲಯದ ಗಮನಕ್ಕೂ ತನಿಖಾಧಿಕಾರಿಗಳು ತಂದಿದ್ದಾರೆ.
ಯಾವೆಲ್ಲಾ ಆರೋಪಗಳು: ಈ ಹಿಂದೆ ದಾಖಲಾಗಿದ್ದ ಪ್ರಕರಣ 39/25ಕ್ಕೆ ಹೊಸದಾಗಿ ಹಲವು ಸೆಕ್ಷನ್ಗಳನ್ನು ಸೇರಿಸಲಾಗಿದೆ. ಬಿಎನ್ಎಸ್ 336 (ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಭಯಭೀತಗೊಳಿಸುವುದು), 230 (ಸಾರ್ವಜನಿಕ ಸೇವಕರಿಗೆ ತಪುö್ಪ ಮಾಹಿತಿ ನೀಡುವುದು), 231 (ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಪಡಿಸುವುದು), 229 (ಸುಳ್ಳು ಸಾಕ್ಷ್ಯ ನೀಡುವುದು), 227 (ಸಾರ್ವಜನಿಕ ಶಾಂತಿ ಕದಡುವುದು), 228 (ನ್ಯಾಯಾಲಯಕ್ಕೆ ಅವಮಾನ ಮಾಡುವುದು), 240 (ತಪ್ಪು ಮಾಹಿತಿ ನೀಡಿ ತನಿಖೆ ದಿಕ್ಕು ತಪ್ಪಿಸುವುದು), 236 (ಪಿತೂರಿ), 233 (ತಪ್ಪಾಗಿ ಜನರನ್ನು ಪ್ರೇರೇಪಿಸು ವುದು) ಮತ್ತು 248 (ಸುಳ್ಳು ದೂರು ನೀಡಿ ಸಮಯ ಹಾಳು ಮಾಡುವುದು) ಮುಂತಾದ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.