ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಸಿಂಧೂ ನದಿ ನೀರು ನಿಲ್ಲಿಸಿ ಪಾಪಿ ಪಾಕ್ಗೆ ಜಲಾಘಾತ ನೀಡಿರುವ ಭಾರತ, ಇದೀಗ ಚೆನಾಬ್ ನದಿ ನೀರಿನ ಹರಿವನ್ನೂ ಬಂದ್ ಮಾಡಿ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಕೊಟ್ಟಿದೆ.
ಭಾನುವಾರ ಬಾಗ್ಲಿಹಾರ್ ಅಣೆಕಟ್ಟು ಮೂಲಕ ಚೆನಾಬ್ ನದಿಗೆ ಹರಿಯುವ ನೀರನ್ನು ಭಾರತ ನಿಲ್ಲಿಸಿದೆ. ಇದೇ ವೇಳೆ ಝೇಲಂ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಶನ್ಗಂಜ್ ಅಣೆಕಟ್ಟಿನಿಂದ ಪಾಕಿಸ್ತಾನಕ್ಕೆ ಹರಿಯುವ ನೀರು ನಿಲ್ಲಿಸಲೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಇದನ್ನೂ ಭಾರತ ಜಾರಿ ಮಾಡಬಹುದು ಎನ್ನಲಾಗುತ್ತಿದೆ.
ಸಿಂಧೂ, ಚೆನಾಬ್ ಹಾಗೂ ಝೇಲಂನAತಹ ನದಿಗಳ ನೀರು ಪಾಕಿಸ್ತಾನದ ಜೀವನಾಡಿಯಾಗಿದ್ದು ಆ ದೇಶದ ಬಹುಪಾಲು ಜನರು ಕುಡಿಯಲು ಹಾಗೂ ಕೃಷಿ ಮಾಡಲು ಈ ನದಿಗಳ ನೀರನ್ನೇ ಅವಲಂಬಿಸಿದ್ದಾರೆ. ಇನ್ನು ಬಗ್ಲಿಹಾರ್ ಅಣೆಕಟ್ಟು ಎರಡೂ ದೇಶಗಳ ನಡುವಣ ಅತಿದೊಡ್ಡ ವಿವಾದದ ವಿಷಯವಾಗಿದ್ದು ಪಾಕಿಸ್ತಾನ ಈ ಬಗ್ಗೆ ವಿಶ್ವಬ್ಯಾಂಕ್ನ ಮಧ್ಯಸ್ಥಿಕೆ ಕೋರಿದೆ.
ಆದರೆ ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಪಾಕ್ ಪ್ರೇರಿತ ಭಯೋತ್ಪಾದಕರು ಅಮಾನುಷ ರೀತಿಯಲ್ಲಿ ಕೊಂದ ನಂತರ ಭಾರತ ಈಗ ಪಾಕ್ ವಿರುದ್ಧ ಇಂಥ ಕಠಿಣ ಕ್ರಮಗಳ ಸರಣಿ ಮುಂದುವರಿಸಿದೆ. ಸಿಂಧೂ ನದಿ ಜಲ ಒಪ್ಪಂದ ರದ್ದು, ಪಾಕ್ಗೆ ವಾಯುಪ್ರದೇಶ ನಿರ್ಬಂಧ ಹಾಗೂ ಪಾಕ್ನಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವ ಮೂಲಕ ಪಾಕಿಸ್ತಾನಕ್ಕೆ ಈಗಾಗಲೇ ದೊಡ್ಡ ಆಘಾತ ನೀಡಲಾಗಿದೆ.


