ಬಂಟ್ವಾಳ ; ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 1.25 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಕುಖ್ಯಾತ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಮಾಡಿದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿಗಳನ್ನು ಕೇರಳದ ಕೊಲ್ಲಂ ಜಿಲ್ಲೆಯ ಆಲಪ್ಪಾಡ್ನ ಪ್ರಕಾಶ್ ಬಾಬು ಅಲಿಯಾಸ್ ಮೊಹಮ್ಮದ್ ನಿಯಾಜ್ (46) ಕೇರಳದ ಕಾಸರಗೋಡು ಜಿಲ್ಲೆಯ ಕೋಟಂಕರ ಮೂಲದ ಬಶೀರ್ ಕೆ ಪಿ ಅಲಿಯಾಸ್ ಆಕ್ರಿ ಬಶೀರ್ (44); ಮತ್ತು ಪುದು ಗ್ರಾಮದ ಎಫ್ ಜೆ ಮೊಹಮ್ಮದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಕೋಟಂಕರ ಮೂಲದ ಬಶೀರ್ ಕೆಪಿ ಖತರ್ನಾಕ್ ಅಪರಾಧಿಯಾಗಿದ್ದು, ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 13 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಪ್ರಕಾಶ್ ಬಾಬು ವಿರುದ್ಧ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ನವೆಂಬರ್ 4 ರಂದು ದೇವಸ್ಥಾನದ ಮುಂಬಾಗಿಲು ಮುರಿದು ಒಳನುಗ್ಗಿ ಆಭರಣಗಳ ಜೊತೆಗೆ ಕಣ್ಗಾವಲು ಕ್ಯಾಮೆರಾದ ಡಿವಿಆರ್ ಅನ್ನು ಕದ್ದೊಯ್ದಿದ್ದರು. ಹಿಂದಿನ ದಿನ ಸುಜೀರ್ನ ಶ್ರೀ ರಾವಲನಾಥ ದೇವಸ್ಥಾನದಲ್ಲಿ ಇದೇ ರೀತಿಯ ಕಳ್ಳತನ ವರದಿಯಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಯಿತು.
ದಕ್ಷಿಣ ಕನ್ನಡ ಎಸ್ಪಿ ಯತೀಶ್ ಎನ್ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಶಿವಕುಮಾರ್, ಪಿಎಸ್ಐಗಳಾದ ನಂದಕುಮಾರ್, ಹರೀಶ್, ಲೋಲಾಕ್ಷ, ಸಿಬ್ಬಂದಿಗಳ ತಂಡ ಪಾಲ್ಗೊಂಡಿತ್ತು.


