ಬೆಂಗಳೂರು ; ಕಾರವಾರದಲ್ಲಿ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ 82ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆಯಾಗಿದೆ. ಜೊತೆಗೆ ವಂಚನೆ ಕೇಸ್ನಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಒಟ್ಟು ಆರು ಪ್ರಕರಣಗಳಲ್ಲಿ ಈವರೆಗೆ ವಿಧಿಸಿದ ದಂಡದ ಮೊತ್ತ 44 ಕೋಟಿ ರೂಪಾಯಿ ದಾಟಿದೆ. ಈಗ ಕಳೆದಿರುವ ಶಿಕ್ಷೆ ಪ್ರಮಾಣ ಹೊರತುಪಡಿಸಿ ಉಳಿದ ಶಿಕ್ಷೆ ಅನುಭವಿಸಬೇಕಿದೆ. ಸತೀಶ್ ಸೈಲ್ ಜತೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್ಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಇಡೀ ಪ್ರಕರಣದಿಂದ ಈಗ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪರಿಣಾಮಗಳು ಉಂಟಾಗಲಿದ್ದು ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಹೈಕೋರ್ಟ್ ತಡೆಹಿಡಿಯದಿದ್ದರೆ ಸತೀಶ್ ಸೈಲ್ ತಮ್ಮ ಶಾಸಕತ್ವದಿಂದ ಅನರ್ಹಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಸತೀಶ್ ಸೈಲ್ ಅವರಿಗೆ ಈ ಪ್ರಕರಣದಲ್ಲಿ ಹೈಕೋರ್ಟ್ ಒಂದು ವೇಳೆ ಜಾಮೀನು ನೀಡಿದರೂ, ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಸತೀಶ ಅವರು ಜನ ಪ್ರತಿನಿಧಿಗಳ ಕಾಯ್ದೆ ಅಡಿಯಲ್ಲಿ ಅನರ್ಹರಾದರೆ ಆರು ತಿಂಗಳ ಒಳಗೆ ಕಾರವಾರ ವಿಧಾನಸಭೆಗೆ ಮತ್ತೊಮ್ಮೆ ಚುನಾವಣೆ ನಡೆಯಬೇಕಾಗಿ ಬರಬಹುದು.
ಏನಿದು ಪ್ರಕರಣ?
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಅತಿದೊಡ್ಡ ಅಕ್ರಮ. 2010ರಲ್ಲಿ ಬಳ್ಳಾರಿಯಿಂದ ಮ್ಯಾಂಗನೀಸ್ ಅದಿರನ್ನ ಕಾರವಾರ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಹಗರಣ ದೊಡ್ಡ ದೊಡ್ಡ ಘಟಾನುಘಟಿ ನಾಯಕರನ್ನೇ ಸುತ್ತಿಕೊಂಡಿತ್ತು. ಇದೇ ಕೇಸ್ ಹಾಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ನ ಸುಳಿಯೊಳಗೆ ಸಿಲುಕಿಸಿಕೊಂಡು ಇದೀಗ ಸಂಕಷ್ಟಕ್ಕೆ ತಳ್ಳಿದೆ.
ಸೀಜ್ ಆಗಿದ್ದ 11 ಸಾವಿರದ 312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸತೀಶ್ ಸೈಲ್ ಸಾಗಾಟ ಮಾಡಿದ್ದರು. ಈ ಅಕ್ರಮದಿಂದ ಸರ್ಕಾರದ ಖಜಾನೆಗೆ ಭಾರೀ ನಷ್ಟವುಂಟಾಗಿತ್ತು. ಇದನ್ನು ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಬೆಳಕಿಗೆ ತಂದಿದ್ದರು. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇದೀಗ ಶಾಸಕನಿಗೆ ಸಂಕಷ್ಟ ಎದುರಾಗಿದೆ.


