ಮಂಗಳೂರು ; ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಬಳಿಕ ರಾಹುಲ್ ಅವರು ಮುಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ಹಾಗೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಬಪ್ಪನಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕೆ ಎಲ್ ರಾಹುಲ್ ಪತ್ನಿ ಬಾಲಿವುಡ್ ನಟಿ ಅತಿಯಾ ಶೆಟ್ಟಿ, ನಟ ಅಹನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ಅಶ್ವಿನ್ ಆಳ್ವ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
ಖ್ಯಾತ ಕ್ರಿಕೆಟಿಗ ಕೆ ಎಲ್ ರಾಹುಲ್ ಪತ್ನಿ ಅತಿಯಾ ಶೆಟ್ಟಿವರ ತಂದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೂಲತಃ ಮುಲ್ಕಿ ಯವರಾಗಿದ್ದು ನಟ ಸುನಿಲ್ ಶೆಟ್ಟಿ ಅಳಿಯನಾಗಿ ಮುಲ್ಕಿಗೆ ಪ್ರಥಮ ಭೇಟಿಯಾಗಿದೆ. ಖ್ಯಾತ ಕ್ರಿಕೆಟ್ ಆಟಗಾರ ಕೆ ಎಲ್ ರಾಹುಲ್ ಆಗಮಿಸುತ್ತಲೇ ಅವರ ಅಭಿಮಾನಿಗಳ ದಂಡು ಕ್ಷೇತ್ರದಲ್ಲಿ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು. ಶಿಮಂತೂರು ಕ್ಷೇತ್ರದಲ್ಲಿ ಸಣ್ಣ ಮಕ್ಕಳು ಬ್ಯಾಟಿನಲ್ಲಿ ಹಾಗೂ ಪುಸ್ತಕದಲ್ಲಿ ಅವರ ಹಸ್ತಾಕ್ಷರ ಹಾಗೂ ಫೋಟೋ ತೆಗೆಸಿ ಸಂಭ್ರಮಿಸಿದರು. ಅಭಿಮಾನಿಗಳ ಜೊತೆ ತುಳುವಿನಲ್ಲಿ ಮಾತನಾಡಿ ಮನ ಗೆದ್ದಿದ್ದಾರೆ.


