ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಮತ್ತು ಅವರ ಪುತ್ರ ಬಿಜೆಪಿ ಸೇರುವ ಕುರಿತು ಪ್ರಬಲ ಚರ್ಚೆ ನಡೆಯುತ್ತಿರುವಾಗಲೇ ಕಾಂಗ್ರೆಸ್ನ ನಾಯಕ ಹಾಗೂ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಬಿಜೆಪಿಗೆ ಮರು ಸೇರ್ಪಡೆಗೊಳ್ಳುವ ಸುದ್ದಿ ವರದಿಯಾಗಿದೆ .
ಮರುಪ್ರವೇಶಕ್ಕಾಗಿ ನಾಯಕರನ್ನು ಸಮಾಧಾನಪಡಿಸಲು ಅವರು ಬಿಜೆಪಿಯ ಹಿರಿಯ ನಾಯಕತ್ವದಿಂದ ಸಮಯ ಕೇಳಿದ್ದಾರೆ ಎಂದು ತಿಳಿಯಲಾಗಿದೆ . ಸಿದ್ದು ಅವರು ಪಕ್ಷಕ್ಕೆ ಪ್ರವೇಶಿಸಿದಾಗಿನಿಂದಲೂ ಸ್ಥಳೀಯ ಕಾಂಗ್ರೆಸ್ ಘಟಕದೊಂದಿಗೆ ಗೊಂದಲದ ಸಂಬಂಧವನ್ನು ಎದುರಿಸುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯವೂ ಅತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.
2004 ರಲ್ಲಿ, ಬಿಜೆಪಿ ಟಿಕೆಟ್ನಲ್ಲಿ ಅಮೃತಸರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಿಧು ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಅಲ್ಲಿ ಅವರು ತಮ್ಮ ಮೊದಲ ಚುನಾವಣೆಯಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಆರ್ಎಲ್ ಭಾಟಿಯಾ ಅವರನ್ನು ಸೋಲಿಸಿದ್ದರು. ಬಿಜೆಪಿಯಲ್ಲಿದ್ದಾಗ ಶಿರೋಮಣಿ ಅಕಾಲಿದಳ ಬಿಜೆಪಿಯ ಮಿತ್ರಪಕ್ಷವಾಗಿದ್ದರೂ ಬಾದಲ್ ಕುಟುಂಬದ ಜತೆ ಸಿದ್ದು ಸಂಬಂಧ ಹಳಸಿತ್ತು. ನಂತರ, 2014 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಅಮೃತಸರದಿಂದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರನ್ನು ಕಣಕ್ಕಿಳಿಸಿದಾಗ ಬಿಜೆಪಿಯೊಂದಿಗಿನ ಅವರ ಸಂಬಂಧವೂ ದುರ್ಬಲಗೊಂಡಿತ್ತು. ನಂತರ ಅವರು ರಾಜ್ಯಸಭೆಗೆ ಸೇರ್ಪಡೆಗೊಂಡರೂ, ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದರು.


