ಹಾಸನ : ನಿರಂತರ ಮಳೆಯ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಶಿರಾಡಿ ಘಾಟ್ನಲ್ಲಿ ಹಲವು ಕಡೆ ಭೂಕುಸಿತದ ಭೀತಿ ಎದುರಾಗಿರುವ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭಾನ್ವಿತ್ ಅವರು ಸಂಭವನೀಯ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳೊಂದಿಗೆ ಕಪ್ಪಳ್ಳಿ, ದೊಡ್ಡತಪ್ಲು, ಹೆಗ್ಗದ್ದೆ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ ಎಸ್ಪಿ, ಭೂಕುಸಿತ ತಡೆ ಹಾಗೂ ತುರ್ತು ಕಾರ್ಯಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಹಿಂದೆ ಶಿರಾಡಿ ಘಾಟ್ನಲ್ಲಿ ಒಟ್ಟು 17 ಕಡೆ ಪದೇಪದೇ ಭೂಕುಸಿತ ಸಂಭವಿಸುತ್ತಿತ್ತು. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಪಾಯದ ಸ್ಥಳಗಳ ಸಂಖ್ಯೆ ಐದಕ್ಕೆ ಇಳಿದಿದೆ ಎಂದು ಎಸ್ಪಿ ತಿಳಿಸಿದರು. ಯಾವುದೇ ಅವಘಡ ಸಂಭವಿಸಿದರೂ ತಕ್ಷಣ ಕಾರ್ಯಾಚರಣೆ ನಡೆಸಲು ನಾಲ್ಕು ಜೆಸಿಬಿ, ಎರಡು ಹಿಟಾಚಿ ಯಂತ್ರಗಳು, ಸಿಬ್ಬಂದಿ ಸಂಚಾರಕ್ಕೆ ವಾಹನಗಳು ಹಾಗೂ 24 ಗಂಟೆಯೂ ಆಂಬುಲೆನ್ಸ್ ಸನ್ನದ್ಧವಾಗಿರಲಿದೆ.
ಸಕಲೇಶಪುರ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ನಿರಂತರ ಸಮನ್ವಯದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಪಾಯದ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರು ಎಚ್ಚರಿಕೆ ವಹಿಸಿ, ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಸ್ಪಿ ಶುಭಾನ್ವಿತ್ ಮನವಿ ಮಾಡಿದ್ದಾರೆ.


