ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಕಂಡುಕೇಳರಿಯದ ಮಟ್ಟಿಗೆ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಅದರ ಪರಿಣಾಮ ಮೂಕ ಪ್ರಾಣಿ–ಪಕ್ಷಿಗಳ ಮೇಲೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಪೊಲೀಸ್ ಇಲಾಖೆ ಮಾನವೀಯ ಕಾರ್ಯವೊಂದನ್ನು ಕೈಗೊಂಡಿದೆ. ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ಪೊಲೀಸ್ ಶ್ವಾನಗಳಿಗೆ ತಂಪಿನ ವಾತಾವರಣ ಕಲ್ಪಿಸುವ ಉದ್ದೇಶದಿಂದ ಶ್ವಾನದಳದ ನಾಲ್ಕು ಕೊಠಡಿಗಳಿಗೆ ಏರ್ ಕೂಲರ್ ಅಳವಡಿಸಲಾಗಿದೆ. ಇದರ ಪರಿಣಾಮ ಶ್ವಾನಗಳು ಇದೀಗ ತಂಪು ಗಾಳಿಯಲ್ಲಿ ನಿರಾಳವಾಗಿವೆ.
ಹಾವೇರಿಯ ಡಿಆರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ವಾನದಳದಲ್ಲಿ ಕೈರಾ, ಪಾರು, ಸಾನ್ಸಾ ಮತ್ತು ಆರ್ಯ ಎಂಬ ತರಬೇತಿ ಪಡೆದ ಶ್ವಾನಗಳಿದ್ದು, ಇವುಗಳು ಇದೀಗ ವಿಶೇಷ ತಂಪು ವ್ಯವಸ್ಥೆಯಲ್ಲಿ ಆರೈಕೆ ಪಡೆಯುತ್ತಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರು ಶ್ವಾನದಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಕುರಿತು ಮಾತನಾಡಿದ ಎಸ್ಪಿ ಯಶೋಧ ವಂಟಗೋಡಿ,“ಸಾಮಾನ್ಯವಾಗಿ ಮನುಷ್ಯರಿಗಿಂತ ಶ್ವಾನಗಳಿಗೆ ಹೀಟ್ ಹೆಚ್ಚು ತಟ್ಟುತ್ತದೆ. ಅದರಲ್ಲೂ ತರಬೇತಿ ಪಡೆದ ಪೊಲೀಸ್ ಶ್ವಾನಗಳು ಅಪರಾಧ ತನಿಖೆ ವೇಳೆ ಹೆಚ್ಚು ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಅವುಗಳ ಆರೋಗ್ಯ ಕಾಪಾಡುವುದು ಇಲಾಖೆಯ ಜವಾಬ್ದಾರಿ,” ಎಂದು ಹೇಳಿದರು. ಕಳೆದ ಹತ್ತು ದಿನಗಳಿಂದಲೇ ಶ್ವಾನದಳದಲ್ಲಿ ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದ್ದು, ತೀವ್ರ ಬಿಸಿಲಿನ ನಡುವೆಯೂ ಶ್ವಾನಗಳ ಆರೋಗ್ಯದ ಕಡೆ ವಿಶೇಷ ಗಮನ ಹರಿಸಲಾಗಿದೆ.


