ಮಡಿಕೇರಿ : ನಾಪೋಕ್ಲುವಿನಲ್ಲಿ ಪತ್ರಕರ್ತ ಝಕರಿಯ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಾಪೋಕ್ಲುವಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಅವರ ಪುತ್ರ ಸಿದ್ದೀಕ್ (20), ಇರ್ಫಾನ್ ಪಾಶ ಅವರ ಪುತ್ರ ರುಮಾನ್ (21) ಹಾಗೂ ಮಹಮ್ಮದ್ ಪಿ.ಎಂ. ಅವರ ಪುತ್ರ ನಾಫಿ (22) ಎಂದು ಗುರುತಿಸಲಾಗಿದೆ.
ಆರೋಪಿಗಳು ಬಳಸಿದ್ದ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಅವರ ಹಿರಿಯ ಪುತ್ರ ಮಹಮ್ಮದ್ ಅಲಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಮತ್ತೊಂದು ಗೂಡ್ಸ್ ವಾಹನದ ಪತ್ತೆಗೂ ಬಲೆ ಬೀಸಲಾಗಿದೆ.
ಸೋಮವಾರ ಸಂಜೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಆರೋಪಿಗಳಲ್ಲಿ ಒಬ್ಬನಾದ ರುಮಾನ್, ಆಟೋ ಬಾಡಿಗೆ ಮಾಡುವ ನೆಪದಲ್ಲಿ ಪತ್ರಕರ್ತ ಝಕರಿಯ ಅವರನ್ನು ನಾಪೋಕ್ಲು ಪಟ್ಟಣದಿಂದ ಬಲಮುರಿ ಕಡೆಗೆ ಕರೆಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಬಳಿಕ ಮಾರ್ಗಮಧ್ಯೆ ವೇನ್ಯೂ ಕಾರಿನಲ್ಲಿ ಬಂದ ಆರೋಪಿಗಳು ಆಟೋಗೆ ಅಡ್ಡಗಟ್ಟಿ, ಝಕರಿಯ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಬಾವಲಿ–ಚೆಯ್ಯಂಡಾಣೆ ಸಂಪರ್ಕ ರಸ್ತೆಯ ಕಾಫಿ ಮಿಲ್ ಸಮೀಪ ಝಕರಿಯ ಅವರ ಮೇಲೆ ಸಿದ್ದೀಕ್, ಮಹಮ್ಮದ್ ಅಲಿ, ನಾಫಿ ಹಾಗೂ ರುಮಾನ್ ಸೇರಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲುವಿನಲ್ಲಿ ಸಾರ್ವಜನಿಕ ಆತಂಕ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


