ಮಂಗಳೂರು : ಮಂಗಳೂರು ಹೊರವಲಯದ ಫಲ್ಗುಣಿ ನದಿಯ ವ್ಯಾಪ್ತಿಯ ಮಳವೂರು–ಕೆಂಜಾರ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿರುವ ಘಟನೆ ಪರಿಸರ ಕಳವಳಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗಿದೆ.






ನದಿಯ ಹಲವೆಡೆ ಸತ್ತ ಮೀನುಗಳು ತೇಲಿಬಂದಿರುವುದು ಕಂಡುಬಂದಿದ್ದು, ಇತ್ತೀಚಿನ ದಿನಗಳಲ್ಲಿ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಸಮೀಪದ ಕೈಗಾರಿಕೆಗಳಿಂದ ಶುದ್ಧೀಕರಿಸದ ವಿಷಕಾರಿ ತ್ಯಾಜ್ಯವನ್ನು ನದಿಗೆ ಹರಿಸಲಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.
“ನಮ್ಮ ಮನೆಯ ಬಾವಿಗಳ ನೀರೂ ಮಾಲಿನ್ಯಗೊಂಡಿದೆ. ನಮ್ಮ ಸಮಸ್ಯೆ ಕೇಳೋವರು ಯಾರೂ ಇಲ್ಲ,” ಎಂದು ಸ್ಥಳೀಯ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಗೂ ಈ ಪರಿಣಾಮ ವ್ಯಾಪಿಸಿದ್ದು ಈ ಮಾಲಿನ್ಯ ಸಮಸ್ಯೆ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ನೀರಿನ ಮೂಲಗಳಿಗೂ ತಟ್ಟಿದೆ ಎನ್ನಲಾಗಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಪ್ರತಿಭಟನೆ ನಡೆಸುವುದಾಗಿ ಪಂಚಾಯತ್ ಎಚ್ಚರಿಕೆ ನೀಡಿದೆ.
ಘಟನೆ ಬಳಿಕ ಕರ್ನಾಟಕ ಸ್ಟೇಟ್ ಪೊಲ್ಲ್ಯೂಷನ್ ಕಂಟ್ರೋಲ್ ಬೋರ್ಡ್ ಉಪ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಚ್ಚನಾಡಿ ಸೇವಗೆ ಟ್ರೀಟ್ಮೆಂಟ್ ಪ್ಲಾಂಟ್ ನಿಂದ ಶುದ್ಧೀಕರಿಸದ ತ್ಯಾಜ್ಯ ನೀರನ್ನು ನದಿಗೆ ಹರಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ನದಿ ನೀರು ಹಾಗೂ ಸಮೀಪದ ಬಾವಿಗಳ ನೀರಿನ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಮಾಲಿನ್ಯದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಈ ಘಟನೆ ಫಲ್ಗುಣಿ ನದಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಪರಿಸರ ಹಾನಿ ಮತ್ತು ನಿಯಂತ್ರಣವಿಲ್ಲದ ಮಾಲಿನ್ಯದ ಬಗ್ಗೆ ಮತ್ತೆ ಗಂಭೀರ ಚರ್ಚೆಗೆ ಕಾರಣವಾಗಿದೆ.


