ಮಂಗಳೂರು : ಆರೋಗ್ಯ ಸಚಿವ U. T. ಖಾದರ್ ಅವರು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.





ಬಳಿಕ ಮಾತನಾಡಿದ ಅವರು ಮೂರು ವರ್ಷಗಳ ಕಾಲ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ನಾನು, ಇದೀಗ ಆರೋಗ್ಯ ಸಚಿವನಾಗಿ ಮಂಗಳೂರಿಗೆ ಬಂದಿದ್ದೇನೆ. ಉಳ್ಳಾಲ ದರ್ಗಾ, ಚರ್ಚ್ ಹಾಗೂ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿ ಎಲ್ಲರ ಆಶೀರ್ವಾದ ಕೋರಿದ್ದೇನೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಕಾರ್ಯಕ್ಷಮತೆಯ ಕುರಿತು ಮಾತನಾಡಿದ ಸಚಿವರು, “ಸರ್ಕಾರಿ ಆಸ್ಪತ್ರೆಗಳ ನಿಜವಾದ ಸ್ಥಿತಿ ತಿಳಿಯಬೇಕಾದರೆ ಮಧ್ಯರಾತ್ರಿ ಭೇಟಿ ನೀಡಬೇಕು. ಆಗ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದರು.
ಇತ್ತೀಚೆಗೆ ಆಸ್ಪತ್ರೆಗಳಿಗೆ ಅಚ್ಚರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊದಲ ಹಂತದ ಸಭೆಯನ್ನೂ ನಡೆಸಿದ್ದೇನೆ. ವೈದ್ಯರು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಇದು ಎಲ್ಲರ ಜವಾಬ್ದಾರಿ ಎಂದು ಖಾದರ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸುಮಾರು 900 ಎಂಬಿಬಿಎಸ್ ವೈದ್ಯರ ಕೊರತೆ ಇರುವುದರಿಂದ, ಕೊರತೆ ಇರುವ ಪ್ರದೇಶಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಒಂದು ವಾರದೊಳಗೆ ಅರ್ಹ ವೈದ್ಯರಿಗೆ ನೇಮಕಾತಿ ಪತ್ರ ನೀಡಬೇಕು. ವಿಳಂಬವಾದರೆ ಸಂಬಂಧಿಸಿದ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಅವರ ಪತ್ನಿಯ ಟ್ವೀಟ್ ಕುರಿತು ಮಾಹಿತಿ ಇಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಹಾಗೂ ಜಿಲ್ಲಾ ಉಸ್ತುವಾರಿ ನೇಮಕಾತಿ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಳ್ಳುತ್ತಾರೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಕುರಿತು ಮಾತನಾಡಿದ ಅವರು, “ನಾನು ಈಗಾಗಲೇ ಕೋಲಾರ, ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಉಸ್ತುವಾರಿಯಾಗಿದ್ದೆ. ಮಂಗಳೂರು ಜಿಲ್ಲೆಯನ್ನು ಬೇರೆಯವರಿಗೆ ನೀಡಿದರೆ ಹೊಸ ಜಿಲ್ಲೆಯ ಅನುಭವ ಪಡೆಯಲು ಅವಕಾಶ ಸಿಗುತ್ತದೆ. ಆದರೆ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮ” ಎಂದು ಸ್ಪಷ್ಟಪಡಿಸಿದರು.


