ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ಪ್ರಕೃತಿ ಸೌಂದರ್ಯ ಸವಿಯಲು, ಫೋಟೋ ಹಾಗೂ ಸೆಲ್ಫಿ ತೆಗೆಯಲು ಘಾಟಿಯಲ್ಲಿ ವಾಹನ ನಿಲ್ಲಿಸುವ ನೂರಾರು ಪ್ರವಾಸಿಗರ ನಡುವೆ ಇದೀಗ ಚಿರತೆಯ ಸಂಚಾರದ ಮಾಹಿತಿ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಬೇಟೆಗೆ ಹೊಂಚು ಹಾಕಿ ಕಾದು ಕುಳಿತ ಭಂಗಿಯಲ್ಲಿದ್ದ ಚಿರತೆಯ ದೃಶ್ಯ ಕೆಲವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಹಿಂದೆ ಕಾಡಾನೆಗಳ ಸಂಚಾರದಿಂದ ಸುದ್ದಿಯಾಗಿದ್ದ ಚಾರ್ಮಾಡಿ ಘಾಟಿಯಲ್ಲಿ ಇದೀಗ ಚಿರತೆಯ ಭಯವೂ ಹೆಚ್ಚಾಗಿದೆ. ವಿಶೇಷವಾಗಿ ಕಾರು ಹಾಗೂ ಬೈಕ್ಗಳಿಂದ ಇಳಿದು ಫೋಟೋ ತೆಗೆಯುವವರು ಹೆಚ್ಚಿನ ಜಾಗ್ರತೆ ವಹಿಸುವಂತೆ ಸ್ಥಳೀಯರು ಸೂಚಿಸಿದ್ದಾರೆ.
ಚಿಕ್ಕಮಗಳೂರು ಮತ್ತು ಮಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ವಾಹನ ಸವಾರರು, ಪ್ರವಾಸಿಗರು ಅನಗತ್ಯವಾಗಿ ವಾಹನ ನಿಲ್ಲಿಸದೆ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಮನವಿ ಮಾಡಲಾಗಿದೆ.


