Thursday, July 23, 2026
Homeರಾಜ್ಯಗಂಗಾವತಿ : ವೈದ್ಯೆಯಾಗಿ ಸ್ವಗ್ರಾಮದ ಸೇವೆಗೆ ಬಂದ ಯುವತಿ: ಗ್ರಾಮಸ್ಥರ ಸಂತಸ.

ಗಂಗಾವತಿ : ವೈದ್ಯೆಯಾಗಿ ಸ್ವಗ್ರಾಮದ ಸೇವೆಗೆ ಬಂದ ಯುವತಿ: ಗ್ರಾಮಸ್ಥರ ಸಂತಸ.

ಗಂಗಾವತಿ : ಸರಕಾರಿ ಸೇವೆಗೆ ಸೇರಿದ ಬಳಿಕ ತಾನು ಹುಟ್ಟಿದ, ಪ್ರಾಥಮಿಕ ಶಿಕ್ಷಣ ಪಡೆದ ಹುಟ್ಟೂರಿನ ಸೇವೆ ಮಾಡುವ ಅದೃಷ್ಟ ಎಲ್ಲರಿಗೂ ಸಿಗದು. ಆದರೆ ಯುವತಿಯೊಬ್ಬರು ಎಂಬಿಬಿಎಸ್ ಪಡೆದು ವೈದ್ಯೆಯಾಗಿ ತನ್ನದೇ ಹುಟ್ಟೂರಿನ ಜನರ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದಾರೆ.

ವೈದ್ಯೆಯಾಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿ ಸರಕಾರ ಮಾಡಿದ್ದ ಆದೇಶದ ಪ್ರತಿ ಹಿಡಿದು ಆ ಯುವತಿ ಗ್ರಾಮಕ್ಕೆ ಭೇಟಿ ನೀಡಿದರು. ತಮ್ಮದೇ ಊರಿನ ಕುಡಿ ಮತ್ತೆ ನಮ್ಮ ಸೇವೆಗೆ ಬಂದಿರುವುದನ್ನು ಕಂಡು ಇಡೀ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ ಘಟನೆ ಸಮೀಪದ ಮುಷ್ಟೂರಿನಲ್ಲಿ ನಡೆದಿದೆ.

ಕಾರಟಗಿ ತಾಲ್ಲೂಕಿನ ಮರಳಿ ಹೋಬಳಿಯ ಮುಸ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯೆಯಾಗಿ ಅದೇ ಗ್ರಾಮದ ಮಾಸ್ಟರ್ ಈರಣ್ಣ ಹೆಬ್ಬಾಳ ಅವರ ಪುತ್ರಿ ನೇತ್ರಾವತಿ ನಿಯೋಜನೆಯಾಗಿದ್ದಾರೆ. ವೈದ್ಯೆಯಾಗಿ ಗ್ರಾಮಕ್ಕೆ ಬಂದ ಯುವತಿಯನ್ನು ಗ್ರಾಮಸ್ಥರು ಆದರದಿಂದ ಬರಮಾಡಿಕೊಂಡು ಸನ್ಮಾನಿಸಿ ಸಂಭ್ರಮಿಸಿದರು.

ಈ ಬಗ್ಗೆ ಮಾತನಾಡಿದ ಗ್ರಾಮದ ಮುಖಂಡ ವಾನಭದ್ರಪ್ಪ, ತಮ್ಮೂರಿನ ಯುವತಿ ತನ್ನದೇ ಗ್ರಾಮದ ಜನರ ಸೇವೆಗೆ ಆಗಮಿಸಿರುವುದು ಸಂತಸ ತಂದಿದೆ. ನಮ್ಮ ನೋವು-ನಲಿವುಗಳನ್ನು ಹತ್ತಿರದಿಂದ ಬಲ್ಲ ಯುವತಿ ನಮಗೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ನಿಜಕ್ಕೂ ಸಂತಸ ತಂದಿದೆ.

ನಮ್ಮೂರಿನಲ್ಲಿಯೇ ಹುಟ್ಟಿ ಬೆಳೆದು, ಪ್ರಾಥಮಿಕ ಶಿಕ್ಷಣ ಪಡೆದ ನೇತ್ರಾವತಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಕುಕನೂರಿನ ನವೋದಯ ವಿದ್ಯಾಲಯದಲ್ಲಿ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಬೀದರ್ನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪೂರ್ಣಗೊಳಿಸಿ ನಮ್ಮೂರಿಗೆ ಬಂದಿರುವುದು ಸಂತಸ ತಂದಿದೆ ಎಂದರು.

ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ವೈದ್ಯೆ ನೇತ್ರಾವತಿ, ಗ್ರಾಮದ ಜನ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು 8 ಕಿಲೋ ಮೀಟರ್ ಅಂತದರ ಶ್ರೀರಾಮನಗರ ಅಥವಾ 12 ಕಿಲೋ ಮೀಟರ್ ಅಂತರದ ಗಂಗಾವತಿಗೆ ಹೋಗಬೇಕು.

ನನ್ನೂರಿನ ಜನರಿಗೆ ಅವರಿದ್ದಲ್ಲಿಯೇ ಗುಣಮಟ್ಟದ ಆರೋಗ್ಯದ ಸೇವೆ ನೀಡುತ್ತೇನೆ. ಸರಕಾರದ ಆಶಯವೂ ಅದೇ ಆಗಿದೆ. ಜನರ ಆಶಯ, ಸಕರ್ಾರ ಗುರಿಯಂತೆ ಕೆಲಸ ಮಾಡುತ್ತೇನೆ. ಹುಟ್ಟೂರಿನಲ್ಲಿ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗದು ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular