ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿರುವ ಬೆನ್ನಲ್ಲೇ, ನೂರಾರು ಮಂದಿ ತಮ್ಮ ದೇಶಕ್ಕೆ ಮರಳಲು ಗಡಿಭಾಗಗಳಲ್ಲಿ ಜಮಾಯಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಉತ್ತರ 24 ಪರಗಣ ಜಿಲ್ಲೆಯ ಬಿಠಾರಿ-ಹಕೀಂಪುರ ಗಡಿಯಲ್ಲಿ ದಾಖಲೆಗಳಿಲ್ಲದೆ ಭಾರತದಲ್ಲಿ ನೆಲೆಸಿದ್ದ ಹಲವರು ಬಾಂಗ್ಲಾದೇಶಕ್ಕೆ ಮರಳಲು ಸಾಲುಗಟ್ಟಿ ನಿಂತಿರುವುದು ಗಮನ ಸೆಳೆದಿದೆ.
ಈ ಕುರಿತು ಮಾತನಾಡಿದ ಸುವೆಂದು ಅಧಿಕಾರಿ, “ಶಂಕಿತ ಅಕ್ರಮ ಒಳನುಸುಳುಕೋರರು ತಕ್ಷಣ ರಾಜ್ಯ ತೊರೆಯಬೇಕು. ಇಲ್ಲವಾದರೆ ಸರ್ಕಾರದ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ “ಪತ್ತೆ ಮಾಡಿ, ಪಟ್ಟಿಯಿಂದ ಅಳಿಸಿ, ಹೊರಗಟ್ಟಿ” ಅಭಿಯಾನ ತೀವ್ರಗೊಳಿಸಲಾಗಿದ್ದು, ಅಕ್ರಮ ವಲಸಿಗರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಮಾಲ್ಡಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಅಕ್ರಮ ಒಳನುಸುಳುಕೋರರನ್ನು ತಾತ್ಕಾಲಿಕವಾಗಿ ಇರಿಸಲು ವಿಶೇಷ ಹಿಡಿದಿಡುವ ಕೇಂದ್ರಗಳನ್ನು ತೆರೆಯಲಾಗಿದೆ.
ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಂಗ್ಲಾಕ್ಕೆ ಮರಳುವವರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


