ಕೊಲ್ಲೂರು : ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ಅವರು ಗುರುವಾರ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.


ದೇವಾಲಯದ ವತಿಯಿಂದ ಪೂರ್ಣಕುಂಭ ಕಲಶದೊಂದಿಗೆ ವಿಜಯ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು.
ಬಳಿಕ ವಿಜಯ್ ಅವರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪ ನೆರವೇರಿಸಿದರು.ದೇವಾಲಯ ಪ್ರವೇಶಕ್ಕೂ ಮುನ್ನ ಧ್ವಜಸ್ತಂಭಕ್ಕೆ ನಮಿಸಿ ಭಕ್ತಿ ಪ್ರದರ್ಶಿಸಿದ ವಿಜಯ್, ಕೈಮುಗಿದು ದೇವಿಯ ಆಶೀರ್ವಾದ ಪಡೆದರು.
ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಉಪಸ್ಥಿತರಿದ್ದರು. ದರ್ಶನ ಮುಗಿದ ಬಳಿಕ ವಿಜಯ್ ಸ್ವತಃ ಕಾರು ಚಲಾಯಿಸಿಕೊಂಡು ವಿಶ್ರಾಂತಿ ಕೇಂದ್ರದತ್ತ ತೆರಳಿದರು.
ಮುಖ್ಯಮಂತ್ರಿ ಆದ ಬಳಿಕವೂ ಸರಳತೆಯನ್ನು ಮೆರೆದ ಅವರ ನಡೆ ಅಭಿಮಾನಿಗಳ ಗಮನ ಸೆಳೆಯಿತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಕೈ ಬೀಸಿ ಸ್ವಾಗತ ಕೋರಿದರೆ, ವಿಜಯ್ ಸಹ ಸಾರ್ವಜನಿಕರತ್ತ ಕೈ ಬೀಸಿ ಪ್ರತಿಕ್ರಿಯಿಸಿದರು.
ವಿಜಯ್ ಅವರ ಕೊಲ್ಲೂರು ಭೇಟಿ ಹಾಗೂ ಸ್ವತಃ ವಾಹನ ಚಾಲನೆ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


