ಸಂಪಾಜೆ : ಮದ್ಯದ ಅಮಲಿನಲ್ಲಿ ಹೆದ್ದಾರಿ ಬದಿಯಲ್ಲಿ ಅಪಘಾತ ತಡೆಗಾಗಿ ಅಳವಡಿಸಿದ್ದ ಕಾನ್ವೆಕ್ಸ್ ಮಿರರ್ನ್ನು ಕಾರಿನಲ್ಲಿ ಬಂದ ಇಬ್ಬರು ಯುವಕರು ಕಳವು ಮಾಡಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಚಡಾವು ಪ್ರದೇಶದಲ್ಲಿ ನಡೆದಿದೆ.
ಮರುದಿನ ಸ್ಥಳೀಯರು ಕನ್ನಡಿ ಕಾಣೆಯಾಗಿರುವುದನ್ನು ಗಮನಿಸಿ ಸಮೀಪದ ಮನೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ, ಕಾರಿನಲ್ಲಿ ಬಂದ ಇಬ್ಬರು ಯುವಕರು ಕನ್ನಡಿಯನ್ನು ಬಿಚ್ಚಿ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಮಾಹಿತಿ ಪೊಲೀಸರಿಗೆ ತಲುಪಿದೆ.
ಸಿಸಿಟಿವಿ ದೃಶ್ಯ ಹಾಗೂ ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಪುತ್ತೂರು ಮೂಲದ ಶ್ರೇಯಸ್ ಕುಮಾರ್ ಮತ್ತು ಪ್ರೀತಮ್ ರೈ ಅವರನ್ನು ಪತ್ತೆಹಚ್ಚಿದ್ದಾರೆ.
ವಿಚಾರಣೆ ವೇಳೆ, ಮದ್ಯದ ಅಮಲಿನಲ್ಲಿ ಪುತ್ತೂರಿನಿಂದ ಮಡಿಕೇರಿಗೆ ತೆರಳುವಾಗ ತಮಾಷೆಗಾಗಿ ಕನ್ನಡಿಯನ್ನು ಬಿಚ್ಚಿ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಪೊಲೀಸರು ಆರೋಪಿಗಳಿಂದಲೇ ಕಳವು ಮಾಡಿದ್ದ ಕಾನ್ವೆಕ್ಸ್ ಮಿರರ್ ಅನ್ನು ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಿ, ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿದುಬಂದಿದೆ.


