ಮೈಸೂರು : ಜಿಲ್ಲೆಯ ಹುಣಸೂರಿನ ರಜಾಕ್ ಮೊಹಲ್ಲಾದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಮೇಲೆ ಪತಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪತ್ನಿಯ ನಡವಳಿಕೆ ಬಗ್ಗೆ ಶಂಕೆ ಹೊಂದಿದ್ದ ಸಮಿವುಲ್ಲಾ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪತ್ನಿ ಸಮೀನಾಬಾನು ಹಾಗೂ ಮಕ್ಕಳಾದ ಅಬ್ನಾನ್ ಷರೀಫ್ ಮತ್ತು ಪುತ್ರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದ ಸಮಿವುಲ್ಲಾ–ಸಮೀನಾಬಾನು ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪತಿಯ ಕಿರುಕುಳದಿಂದ ಬೇಸತ್ತ ಸಮೀನಾಬಾನು ತಿಂಗಳ ಹಿಂದೆ ಗುರುಪುರದಲ್ಲಿರುವ ತವರು ಮನೆ ಸೇರಿದ್ದರು.
ಬುಧವಾರ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದ ಬಳಿಕ ಸಮೀನಾಬಾನು ಗಂಡನ ಮನೆಗೆ ಮರಳಿದ್ದರು. ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಸಮಿವುಲ್ಲಾ ಲಾಂಗ್ನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ತಾಯಿಯನ್ನು ರಕ್ಷಿಸಲು ಮುಂದಾದ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಸಮೀನಾಬಾನು ಸೇರಿದಂತೆ ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಆರೋಪಿ ಸಮಿವುಲ್ಲಾ ಪರಾರಿಯಾಗಿದ್ದಾನೆ.
ಈ ಸಂಬಂಧ ಸಮೀನಾಬಾನು ಅವರ ತಂದೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

