ಕಲಬುರಗಿ : ಕಲಬುರಗಿಯಿಂದ ಚಿಂಚೋಳಿಗೆ ರಾತ್ರಿ ಹೊರಟಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಬಸ್ವೊಂದು ಹೆಡ್ಲೈಟ್ ದೋಷದಿಂದ ಕಂಡಕ್ಟರ್ ಹಿಡಿದಿದ್ದ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಸುಮಾರು 84 ಕಿ.ಮೀ. ಸಂಚರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ ವೇಳೆ ರಸ್ತೆ ಕಾಣುವಂತೆ ಮಾಡಲು ಕಂಡಕ್ಟರ್ ಚಾಲಕರ ಪಕ್ಕದಲ್ಲಿ ಕುಳಿತು ಮೊಬೈಲ್ ಟಾರ್ಚ್ ಬೆಳಗಿಸಿ ಸಹಕರಿಸಿದ್ದು, ಚಾಲಕರು ಅದೇ ಬೆಳಕಿನಲ್ಲಿ ಬಸ್ನ್ನು ಚಿಂಚೋಳಿ ತಲುಪಿಸಿದ್ದಾರೆ ಎನ್ನಲಾಗಿದೆ.
ಈ ದೃಶ್ಯವನ್ನು ಬಸ್ನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಪ್ರಯಾಣಿಕರ ಸುರಕ್ಷತೆಯನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಸ್ ಕಲಬುರಗಿ–ಚಿಂಚೋಳಿ ನಡುವಿನ ದಿನದ ಕೊನೆಯ ಸೇವೆಯಾಗಿದ್ದು, ಹೆಡ್ಲೈಟ್ ಇಲ್ಲದಿದ್ದರೂ ಬಸ್ ಸಂಚರಿಸಿರುವುದು ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್, “ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಜೀವ ಕೈಯಲ್ಲಿಟ್ಟುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ಆಡಳಿತ ವೈಫಲ್ಯದ ಪ್ರತೀಕ” ಎಂದು ಆರೋಪಿಸಿದೆ.


