ಮಂಗಳೂರು : ಮಂಗಳೂರು ಮಹಾನಗರದ ಜೆಪ್ಪು ಕಡೆಕಾರು, ಜೆಪ್ಪಿನಮೊಗರು ನೇತ್ರಾವತಿ ನದಿ ತೀರದ ಪ್ರದೇಶದಲ್ಲಿನ ನೇತ್ರಾವತಿ ಸಭಾಂಗಣ ದಲ್ಲಿ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ ನೀಡುವ ಸಮಾರಂಭ ಜರುಗಿತು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳ ಉದ್ದೇಶಕ್ಕಾಗಿ ನಿರ್ಮಿಸಲಾದ ನೇತ್ರಾವತಿ ಸಭಾಭವನ, ಪಾಲೇಮಾರ್ ಕನ್ವೆನ್ಶನ್ ಸೆಂಟರ್, ಪಾಲೇಮಾರ್ ಫಾರ್ಮ್ಸ್ ಮತ್ತು ಪಾಲೇಮಾರ್ ಗಾರ್ಡನ್ ಎಂಬ ನಾಲ್ಕು ಸೌಲಭ್ಯಗಳ ಅಧಿಕೃತ ಲೋಕಾರ್ಪಣೆ ಶನಿವಾರ, ಮೇ 23, 2026ರಂದು ನಡೆಯಲಿದೆ. ಅದರ ಪೂರ್ವಭಾವಿಯಾಗಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಾಲನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಯೋಗಿಶ್ ಸ್ವಾಗತ ಭಾಷಣ ಮಾಡಿದರು. ಬಳಿಕ ಗಣ್ಯರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು ಹಾಗೂ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪಾಲೇಮಾರ್ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
ಮಾತೆ ಶಕುಂತಲಾ ನರೇಂದ್ರನಾಥ ಕೋಟೆಕಾರ್ ಮಾತನಾಡಿ, “ಚಾಲನೆ ಒಂದು ದೈವಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಸುಮಾರು 40 ವರ್ಷಗಳ ಬಳಿಕ ಮತ್ತೆ ನೇಮೋತ್ಸವ ನಡೆದಿರುವುದು ಕಾರ್ಣಿಕ. ಈ ಸ್ಥಳದ ಅಭಿವೃದ್ಧಿಯ ಹಿಂದೆ ದೈವಿಕ ಶಕ್ತಿ ಅಡಗಿದೆ” ಎಂದು ಹೇಳಿದರು.
ಆಶೀರ್ವಚನ ನೀಡಿದ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ, “ಸಭಾಂಗಣಗಳು ಕೇವಲ ಸಮಾರಂಭಗಳ ಸ್ಥಳವಲ್ಲ, ಸಮಾಜದ ಆತ್ಮೀಯತೆ ಮತ್ತು ಅಭಿವೃದ್ಧಿಗೆ ಕೇಂದ್ರವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, “ಧರ್ಮ ಮತ್ತು ಪ್ರೀತಿಯ ಅಡಿಪಾಯದಲ್ಲಿ ಸಮಾಜ ಬೆಳೆಯಬೇಕು” ಎಂದು ಕರೆ ನೀಡಿದರು. ಇದೇ ವೇಳೆ ಕೃಷ್ಣ ಜೆ. ಪಾಲೇಮಾರ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, “ನೇತ್ರಾವತಿ ತಟದಲ್ಲಿರುವ ಈ ಸಭಾಭವನಗಳು ಸಾರ್ವಜನಿಕ ಉಪಯೋಗಕ್ಕಾಗಿ ಸಮರ್ಪಿತವಾಗಿವೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, “ಈ ಯೋಜನೆಗಳು ಮಹತ್ವದ ಸಾಧನೆಯಾಗಿದ್ದು, ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿವೆ” ಎಂದು ಅಭಿಪ್ರಾಯಪಟ್ಟರು.


