ಮಂಗಳೂರು : ಇನ್ನೇನು ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು 2 ಪಕ್ಷಗಳ ನಡುವೆ ಗದ್ದುಗೆಗೆ ಗುದ್ದಾಟ ನಡೆಯುತ್ತಿರುವುದು ಕಂಡುಬರುತ್ತಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಿರೀಕ್ಷೆ ಇಟ್ಟು ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತದ ನಿರೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ ಇದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಎಪ್ರಿಲ್ 26 ರಂದು ನಡೆಯಲಿದ್ದು, ಈಗಾಗಲೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಂಡಿದೆ. ರಾಜ್ಯದಲ್ಲಿ 28 ರಲ್ಲಿ 28 ನ್ನೂ ಗೆಲ್ಲುವ ಪಣತೊಟ್ಟಿರುವ ಬಿಜೆಪಿಗೆ ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಬಲ ತಂದುಕೊಟ್ಟಿದೆ.
ಈಗಾಗಲೇ ಶಿವಮೊಗ್ಗದಲ್ಲಿ ಚುನಾವಣ ಪ್ರಚಾರ ಮಾಡಿರೋ ಪ್ರಧಾನಿ ಮೋದಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಬರ್ತಾ ಇರೋದು ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ. ಎಪ್ರಿಲ್ 14 ರಂದು ಪ್ರಧಾನಿ ಮೋದಿ ನಗರದ ಗೋಲ್ಡ್ ಪಿಂಚ್ ಸಿಟಿಯಲ್ಲಿ ಸಮಾವೇಶ ನಡೆಸಲಿದ್ದಾರೆ. ಹೀಗಾಗಿ ಇಂದು ಗೋಲ್ಡ್ ಪಿಂಚ್ ಸಿಟಿಯಲ್ಲಿ ಬಿಜೆಪಿ ಪ್ರಮುಖರು ಚಪ್ಪರ ಮೂಹೂರ್ತ ನಡೆಸಿದ್ದಾರೆ. ಆದ್ರೆ ಚಪ್ಪರ ಮೂಹೂರ್ತ ಮುಗಿಯುತ್ತಿದ್ದಂತೆ ಮೋದಿ ಕಾರ್ಯಕ್ರಮದಲ್ಲಿ ಬದಲಾವಣೆ ಆಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನಲ್ಲಿ ಪ್ರಧಾನಿ ಮೋದಿಯವರು ಸಮಾವೇಶ ನಡೆಸುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಆದರೆ ಸಮಾವೇಶದ ಬದಲಾಗಿ ರ್ಯಾಲಿ ನಡೆಸಲಿದ್ದಾರೆ ಎಂದು ಬಿಜೆಪಿ ಪ್ರಮುಖರು ಮಾಹಿತಿ ನೀಡಿದ್ದಾರೆ. ಸಂಜೆ 6 ಗಂಟೆಗೆ ಲೇಡಿಹಿಲ್ ನಾರಾಯಣ ಗುರು ಸರ್ಕಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವಿಗೆ ಮಾಲಾರ್ಪಣ ಮಾಡಿದ ನಂತರ ಲೇಡಿಹಿಲ್ ಸರ್ಕಲ್ ನಿಂದ ನವಭಾರತ್ ಸರ್ಕಲ್ ವರೆಗೆ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋನಲ್ಲಿ ಬಾಗಿಯಾಗಲಿದ್ದಾರೆಂದು ಬಲ್ಲಮೂಲಗಳಿಂದ ಮಾಹಿತಿ ದೊರೆತಿದೆ.ಆದರೆ ಇದೀಗ ಅಲ್ಪ ಬದಲಾವಣೆಯಾಗಿದೆ.
ಪ್ರಧಾನಿಯವರ ಕಾರ್ಯಕ್ರಮ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಮಾವೇಶದ ಬದಲು ರೋಡ್ ಶೋ ಮಾಡುವಂತೆ ರಾಜ್ಯದಿಂದ ಸೂಚನೆ ಬಂದಿದೆ. ಹೀಗಾಗಿ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ರೋಡ್ ಶೋ ನಡೆಯಲಿದೆ. ಜಿಲ್ಲೆಯಿಂದ ದೊಡ್ಡ ಮಟ್ಟದ ಕಾರ್ಯಕರ್ತರನ್ನು ಒಟ್ಟು ಸೇರಿಸುತ್ತೇವೆ. ರಾಜ್ಯ ನಾಯಕರು, ಜಿಲ್ಲೆಯ ಶಾಸಕರು, ನಾಯಕರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಮೈಸೂರಿನಿಂದ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಆದರೆ ಭಾಷಣ ಇರುವುದಿಲ್ಲ ಎಂಬ ಸೂಚನೆ ಬಂದಿದೆ. ಇದರಿಂದ ರೋಡ್ ಶೋವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತೇವೆ. ಒಟ್ಟು ಅಂದಾಜು ಎರಡೂವರೆ ಕಿ.ಮೀ ರೋಡ್ ಶೋ ಇರಲಿದ್ದು, ರಕ್ಷಣೆ ದೃಷ್ಟಿಯಿಂದ ರಾಜ್ಯ, ಕೇಂದ್ರದಿಂದ ಕ್ಲಿಯರೆನ್ಸ್ ಸಿಗಬೇಕಾಗಿದೆ ಎಂದು ಮಾಹಿತಿ ನೀಡಿದರು.


