ಪುತ್ತೂರು : ಕಂಬಳ ಕ್ರೀಡೆಯಲ್ಲಿ ಎಮ್ಮೆಗಳನ್ನು ಅಲ್ಲ, ಕೋಣಗಳನ್ನು ಓಡಿಸಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಕಂಬಳ ಕುರಿತು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ಕಂಬಳದ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು.
ಸೋಮವಾರ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ವಾಟಾಳ್ ನಾಗರಾಜ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಉತ್ತಮ ಪರಿಚಯವಿದೆ. ಆದರೆ ಕಂಬಳದಲ್ಲಿ ಎಮ್ಮೆಗಳನ್ನು ಓಡಿಸುತ್ತಾರೆ ಎಂಬ ಅವರ ಹೇಳಿಕೆ ತಪ್ಪು. ನಾವು ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತೇವೆ. ಕಂಬಳದ ಬಗ್ಗೆ ಅವರಲ್ಲಿರುವ ಗೊಂದಲವನ್ನು ನಿವಾರಿಸುವ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.
ಮೈಸೂರು ಹಾಗೂ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಜನರಿಂದ ನಿರಂತರ ಬೇಡಿಕೆ ಬರುತ್ತಿದೆ. ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ದೆಹಲಿ ಗಣರಾಜ್ಯೋತ್ಸವ ಪೆರೇಡ್ನಲ್ಲೂ ಕಂಬಳವನ್ನು ಪ್ರದರ್ಶಿಸುವ ಕನಸು ಹೊಂದಿದ್ದೇನೆ. ಕರಾವಳಿಯ ಹೆಮ್ಮೆಯ ಕಂಬಳ ಹಾಗೂ ಯಕ್ಷಗಾನವನ್ನು ದೇಶದ ಜನತೆಗೆ ಪರಿಚಯಿಸುವ ಗುರಿಯೊಂದಿಗೆ ನಿರಂತರ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.



